ಬೆಂಗಳೂರು : ಗಣಪ ಅಂದ್ರೆ, ಸಾಕು ಎಂತವರ ಮನದಲ್ಲಾದ್ರೂ ನಮ್ಮ ಸಂಕಷ್ಟ ಹರಿಸೋ ಆರಾಧ್ಯದೈವ ಅನ್ನೋ ಭಾವನೆ ಮೂಡಿತ್ತೆ. ಹೀಗಾಗಿಯೇ ಆತನಿಗೆ ಆದಿಪೂಜೆ ಮಾಡಿ, ವಿಘ್ನವಿನಾಯಕ ಅಂತಾ ಕರಿಯೋದು. ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರ್ತಾ ಇದೆ. ಈ ಹಿನ್ನಲೆಯಲ್ಲಿ ನಗರದ ಹಲವು ಕಡೆ ಕರೊನಾ ಗಣೇಶ ಕಂಗೊಳಿಸುತ್ತಿದ್ದಾನೆ. ಡೆಡ್ಲಿ ಕರೊನಾ ಮನುಕುಲವನ್ನ ಬೆನ್ನತ್ತಿದ ಬೇತಾಳದಂತೆ ಬಿಟ್ಟುಬಿಡದೇ ಕಾಡ್ತಿದೆ. ಹೀಗಾಗಿ ಕೊರೊನಾ ಹೋಗಲಾಡಿಸಲೇಂದು ಗಣೇಶನನ್ನೇ ಡಾಕ್ಟರ್ ನನ್ನಾಗಿ ಮಾಡಿದ್ದಾರೆ. ಅಂದ್ಹಾಗೆ ಇಂತಹದ್ದೊಂದು ವಿಭಿನ್ನ ಗಣೇಶನನ್ನು ತಯಾರಿಸಿರೋದು ಬೆಂಗಳೂರಿನ ವಿವಿಪುರಂನಲ್ಲಿರುವ ವಿನಾಯಕ ಆ್ಯಂಡ್ ಕಂಪನಿಯಲ್ಲಿ…
ಪ್ರತಿ ವರ್ಷ ವಿಭಿನ್ನ ಕಾನ್ಪೆಪ್ಟ್ ನಲ್ಲಿ ಗಣೇಶ ತಯಾರಿಸುವ ಇವರು ಈ ಬಾರಿ ಕೊರೊನಾವನ್ನೇ ವಿಷಯವಸ್ತುವನ್ನಾಗಿಸಿಕೊಂಡು ಗಣೇಶ ತಯಾರಿಸಿದ್ದಾರೆ. ಕೊರೊನಾ ಪಾಸಿಟಿವ್ ಇರೋ ವ್ಯಕ್ತಿಯನ್ನ ಬಿಬಿಎಂಪಿ ಸಿಬ್ಬಂದಿ, ಆರೋಗ್ಯಾಧಿಕಾರಿಗಳು ಪಿಪಿಇ ಕಿಟ್ ಹಾಕಿಕೊಂಡು, ಹೇಗೆ ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ, ರೋಗಿಯ ಸಂಬಂಧಿಕರ ಮನಸ್ಥಿತಿ ಹೇಗಿರತ್ತೆ ಅನ್ನೋದನ್ನ ಮಣ್ಣಿನಾಕೃತಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಕೊರೊನಾ ರೋಗಿಯನ್ನ ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋದಮೇಲೆ ವೈದ್ಯರು ಯಾವ ರೀತಿಯಲ್ಲಿ ಟ್ರಿಟ್ಮೆಂಟ್ ನೀಡ್ತಾರೆ ಅನ್ನೋದನ್ನು ತೋರಿಸಲಾಗಿದೆ. ಇಲ್ಲಿ, ಗಣೇಶನೇ ವೈದ್ಯರ ರೂಪದಲ್ಲಿ ಇರುತ್ತಾನೆ. ಅಸ್ಪತ್ರೆಗಳಲ್ಲಿ ನರ್ಸ್ ಹೇಗೆ ಇರುತ್ತಾರೋ ಅದೇ ರೀತಿಯಲ್ಲಿ ಗಣೇಶನ ವಾಹನ ಇಲಿಯನ್ನ ನರ್ಸ್ ರೀತಿ ಮಾಡಲಾಗಿದೆ. ಇನ್ನು ಕೊರೊನಾ ವೈರಸ್ ನ್ನ ಗಣಪ ತನ್ನ ಕಾಲಿನಿಂದ ತುಳಿದು, ಹೊಸಕಿ ಹಾಕುವಂತಹ ಮನೋಜ್ಞವಾದ ಚಿತ್ರಣವನ್ನ ಕಟ್ಟಿಕೊಡಲಾಗಿದೆ.
ಇನ್ನು ಕೊರೊನಾದ ಬಂದ ರೋಗಿ ಸಾವಿಗೀಡಾಡ್ರೆ, ಅವರನ್ನ ಹೇಗೆ ಅಂತ್ಯಕ್ರಿಯೆ ಮಾಡಲಾಗುತ್ತೆ ಅನ್ನೋದನ್ನ ಸಹ ನಿರ್ಮಿಸಲಾಗಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಬಿಬಿಎಂಪಿ ನಿರ್ಬಂಧ ಹೇರಿದೆ. ಆದರೆ, ಈ ಗಣೇಶನನ್ನ ಪ್ರದರ್ಶನಕ್ಕೆ ಮಾತ್ರ ಇಡಲಾಗಿದೆ. ಒಟ್ಟಾರೆ ಈ ಸಾರಿಯ ಗಣಪ ಬಂದು, ಕರೊನಾ ಸಂಕಷ್ಟ ಪರಿಹರಿಸಲಿ ಅನ್ನೋದು ನಮ್ಮ ಆಶಯ.
