ಶಿವಮೊಗ್ಗ: ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿಯ ಹಲವು ಕಾರ್ಯಕರ್ತರು ರಾಜೀನಾಮೆ ನೀಡುತ್ತಿದ್ದು ಈ ವಿಚಾರವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ನಮ್ಮ ಹುಡುಗರಿಗೆ ಪ್ರಬುದ್ಧತೆ ಕಮ್ಮಿ. ಹಾಗಾಗಿ ರಾಜೀನಾಮೆ ನೀಡ್ತಿದ್ದಾರೆ. ಅವರು ರಾಜೀನಾಮೆ ಕೊಟ್ರೆ ಹೊಸಬರು ಬರ್ತಾರೆ, ಬಿಜೆಪಿಗೇನು ಕಾರ್ಯಕರ್ತರು ಸಿಗುವುದಿಲ್ಲವೇ ಎಂದು ಈಶ್ವರಪ್ಪ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಬಳಿಕ ಬಿಜೆಪಿಯ ಅನೇಕ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಮ್ಮ ಹುಡುಗರಿಗೆ ಪ್ರಬುದ್ಧತೆ ಕಡಿಮೆ ಹಾಗಾಗಿ ಹಿರಿಯರ ಬಗ್ಗೆ ಮಾತನಾಡುತ್ತಾರೆ. ಹಿರಿಯರಾಗಿ ಅವರು ಬೈದರು ಎಂದು ನಾವು ಅವರಿಗೆ ವಾಪಸ್ ಬೈಯುವುದೇ ಸರಿಯೇ. ನಾವು ಅವರನ್ನು ಸಮಾಧಾನ ಮಾಡುತ್ತೇವೆ ಎಂದಿದ್ದಾರೆ.
ಯುವ ಕಾರ್ಯಕರ್ತರು ರಾಜೀನಾಮೆ ಕೊಟ್ಟರು ಎಂದಾಕ್ಷಣ ಅವರ ರಾಜೀನಾಮೆ ಅಂಗೀಕಾರ ಮಾಡಿ ಮನೆಗೆ ಕಳುಹಿಸುವುದು ಕೇವಲ ಐದು ನಿಮಿಷದ ಕೆಲಸ. ಆದರೆ ಅವರಿಗೆ ಸಮಾಧಾನ ಮಾಡುತ್ತೇವೆ. ಬದಲಾಗುತ್ತಾರೆ ಎಂಬ ನಂಬಿಕೆ ನಮಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.