ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಅವರು ಚೀಲದಲ್ಲಿ ಹಣ ಶೇಖರಣೆ ಮಾಡಿ ಹಂಚುತ್ತಿದ್ದಾರೆ ಎಂಬ ಗಂಭೀರ ಆರೋಪ ಮತ್ತು 40% ಕಮಿಷನ್ ದಂಧೆ ವಿರುದ್ಧ ಯುವ ಕಾಂಗ್ರೆಸ್ ‘ವಿಭಿನ್ನ ಚೀಲ ಚಳವಳಿ’ ಹಮ್ಮಿಕೊಂಡಿದೆ. ಆದರೆ ಚಳವಳಿ ಜನರ ಗಮನ ಸಳೆಯುವ ಮುನ್ನವೇ ಶಾಸಕರ ಅಣತಿಯಂತೆ ಪಟ್ಟಣ ಪಂಚಾಯತ್ ಅವುಗಳನ್ನು ಕಿತ್ತೆಸೆದಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

“ಬೆಳ್ತಂಗಡಿ ನಗರದಾದ್ಯಂತ ಶಾಸಕರು ತಾಲೂಕಿನಲ್ಲಿ ನಡೆಸುತ್ತಿರುವ ಭ್ರಷ್ಟಾಚಾರವನ್ನು ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ಪಾಸ್ಟಿಕ್ ಚೀಲದ ಮೇಲೆ “ಚೀಲ ಚಳುವಳಿ 40% ಬೆಳ್ತಂಗಡಿ” ಎಂದು ಬರೆದು ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿತ್ತು. ಇದನ್ನು ಗಮನಿಸಿದ ಶಾಸಕರ ಹಿಂಬಾಲಕರು ಶಾಸಕರಿಗೆ ಮಾಹಿತಿ ನೀಡಿದ್ದಾರೆ. ನಮ್ಮ ಪ್ರತಿಭಟನೆಯ ಭಾಗವಾಗಿ ಅಳವಡಿಸಲಾಗಿದ್ದ ಚೀಲವನ್ನು ಬಿಜೆಪಿ ನೇತೃತ್ವದ ಪಟ್ಟಣ ಪಂಚಾಯತ್ ಆಡಳಿತ ಕಿತ್ತೆಸೆಯುವ ಮೂಲಕ ಭೃಷ್ಟಾಚಾರ ವಿರುದ್ಧದ ಹೋರಾಟವನ್ನು ಹತ್ತಿಕ್ಕಿದೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
