ನವದೆಹಲಿ: ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್ನ್ನು ಮರು ಪರಿಶೀಲಿಸುವ ಅಗತ್ಯವಿದ್ದು, ಬಡವರಿಗೆ ನೇರವಾಗಿ ಹಣ ತಲುಪುವಂತಾಗಬೇಕೆಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೊವಿಡ್ 19 ಬಿಕ್ಕಟ್ಟು ಎದುರಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ ಜನತೆ ಕೈಗೆ ಹಣ ಸಿಗದೆ ಇದ್ದರೆ, ಬಡವರು ನಿರ್ಗತಿಕರು ಏನು ಮಾಡಬೇಕು. ಹೀಗಾಗಿ ಆರ್ಥಿಕ ಪ್ಯಾಕೇಜ್ ಮರುಪರಿಶೀಲನೆಯ ಅಗತ್ಯವಿದೆ ಎಂದು ಮೋದಿಗೆ ಸಲಹೆ ನೀಡಿದ್ದಾರೆ.
2019ರಲ್ಲಿ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಎನ್ವೈಎವೈ ಯೋಜನೆಯನ್ನು ಪ್ರಸ್ತಾಪಿಸಿತ್ತು. ಇದರ ಮೂಲಕ ಸಮಾಜದ ಬಡ ವರ್ಗದ ಜನರಿಗೆ ವಾರ್ಷಿಕವಾಗಿ 72,000 ರೂ.ಗಳ ಆದಾಯದ ಬೆಂಬಲ ಲಭ್ಯವಾಗುತ್ತಿತ್ತು. ಕೇಂದ್ರ ಸರ್ಕಾರವು ಇದಕ್ಕೆ ಸಮಾನವಾದ ಯೋಜನೆಯೊಂದಿಗೆ ಮುಂದೆ ಬರುವಂತೆ ಒತ್ತಾಯಿಸುತ್ತೇನೆ ಎಂದರು.
ಜನರ ಖಾತೆಗೆ ಹಣ ಹಾಕುವ ಬಗ್ಗೆ ಹಲವರೊಂದಿಗೆ ನಾನು ಚರ್ಚಿಸಿದ್ದೇನೆ. ಈ ಎಲ್ಲ ಸಲಹೆಗಳನ್ನು ಪ್ರಧಾನಿ ಮೋದಿ ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದರು.