ಉಡುಪಿ: ಪರ್ಕಳದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯರು ಸೇರಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಘಟನೆ ರವಿವಾರ ನಡೆದಿದೆ.
ಪರ್ಕಳದ ಬಾಬುರಾಯ ಸರ್ಕಲ್ ಮುಂದೆ, ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ವಾಹನ ಚಾಲಕರಿಗೆ ತೊಂದರೆಯಾಗುವುದರ ಜೊತೆಗೆ ಭೂ ಸಂತ್ರಸ್ತರಿಗೆ ಕಳೆದ ನಾಲ್ಕು ತಿಂಗಳಿಂದ ಹಣ ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿರುವ ಜಿಲ್ಲಾಡಳಿತ, ಮತ್ತು ಬಿಜೆಪಿ ಸರಕಾರದ ಜನನಾಯಕರ ವಿಭಿನ್ನ ಹೇಳಿಕೆಯ ಬೇಸತ್ತು ಅವರ ವಿರುದ್ಧ, ಘೋಷಣೆ ಕೂಗಿ, ರಸ್ತೆ ತಡೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ರಮೇಶ್ ಕಾಂಚನ್, ನೂತನ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಭೂ ಸಂತ್ರಸ್ತರಿಗೆ ಹಣ ಶೀಘ್ರ ಬಿಡುಗಡೆ ಮಾಡಬೇಕು, . ಕಳೆದ 2 ವರ್ಷಗಳಿಂದ ಇಲ್ಲಿನ ಜನ ಅಪೂರ್ಣ ಕಾಮಗಾರಿಯಿಂದ ಸಮಸ್ಯೆ ಅನುಭವಿಸುತಿದ್ದಾರೆ. ಕಳೆದ ಬಾರಿ ನಾವು ಪ್ರತಿಭಟನೆ ನಡೆಸಿದಾಗ ಶಾಸಕ ರಘುಪತಿ ಭಟ್ ಸ್ಥಳಕ್ಕೆ ಆಗಮಿಸಿ ಇಲ್ಲಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರು. ಅದರಂತೆ ಶೀಘ್ರದಲ್ಲಿ ಭೂ ಸಂತ್ರಸ್ತರಿಗೆ ಪರಿಹಾರ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸರಕಾರವನ್ನುಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಮೃತ ಶೆಣೈ ಮಾತನಾಡಿ, “ಸರಕಾರವು ಪೆಟ್ರೊಲಿಯಮ್ ಬೆಲೆ ಏರಿಕೆ ಮಾಡಿ ಲಕ್ಷಾಂತರ ರುಪಾಯಿ ತೆರಿಗೆ ಸಂಗ್ರಹ ಮಾಡಿ ಸರಿಯಾದ ರಸ್ತೆಯನ್ನು ಕೂಡಾ ನೀಡುತಿಲ್ಲ. ಮೂವತ್ತು ದಿನಗಳ ಒಳಗೆ ಪರಿಹಾರ ನೀಡುವ ಭರವಸೆ ನೀಡಿ ಭೂಮಿಯನ್ನು ಸ್ವಾಧೀನ ಮಾಡಲಾಗಿತ್ತು ಆದರೆ ಈಗ 6 ರಿಂದ 7 ತಿಂಗಳು ಕಳೆದರೂ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ ಇಲ್ಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸುಕೇಶ್ ಕುಂದರ್ ಹೆರ್ಗಾ, ಮೋಹನ್ ದಾಸ್ ನಾಯಕ್ ಪರ್ಕಳ, ಗಣೇಶ್ ರಾಜ್ ಸರಳೇಬೆಟ್ಟು, ಗಣೇಶ್ ನೆರ್ಗಿ, ಸುಧಾಕರ್ ಪೂಜಾರಿ, ಸದಾನಂದ ಪೂಜಾರಿ, ಸತೀಶ್ ಶೆಟ್ಟಿ ಕೆಳ ಪರ್ಕಳ ಉಪಸ್ಥಿತರಿದ್ದರು. ಪ್ರತಿಭಟನಾಕಾರರು ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ಸಾಂಕೇತಿಕ ಪ್ರತಿಭಟನೆ ನಡೆಸಿದರು.