ಮಹಾರಾಷ್ಟ್ರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವಅಜಯ್ ತುಕಾರಾಂ ಸಾನಡೆ ದಂಪತಿ ಮನೆಗೆ ಭೇಟಿ ನೀಡಿರುವ ವಿಡಿಯೊವನ್ನು ತಮ್ಮ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಲೇಖಕ ಶಾಹು ಪಟೋಲೆ ಅವರೊಂದಿಗೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ದಲಿತ ದಂಪತಿ ಮನೆಗೆ ಭೇಟಿ ನೀಡಿದ್ದು, ದಲಿತ ಪಾಕ ಪದ್ಧತಿ ಮತ್ತು ಸಮುದಾಯ ಎದುರುಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ಕುರಿತಂತೆ ತಮ್ಮ ಎಕ್ಸ್ ನಲ್ಲಿ ‘ಅವರು ಏನು ತಿನ್ನುತ್ತಾರೆ, ಹೇಗೆ ಅಡುಗೆ ಮಾಡುತ್ತಾರೆ, ಅದರ ಸಾಮಾಜಿಕ ಮತ್ತು ರಾಜಕೀಯ ಮಹತ್ವ ಏನು ಎಂಬ ಕುತೂಹಲದೊಂದಿಗೆ ನಾನು ಅಜಯ್ ತುಕಾರಾಂ ಸಾನಡೆ ಮತ್ತು ಅವರ ಪತ್ನಿ ಅಂಜನಾ ಅವರೊಂದಿಗೆ ಇಂದಿನ ಮಧ್ಯಾಹ್ನವನ್ನು ಕಳೆದೆ. ಅಜಯ್ ತುಕರಾಂ ಅವರ ಮನೆಗೆ ನನ್ನನ್ನು ಬಹಳ ಗೌರವದಿಂದ ಆಹ್ವಾನಿಸಿದರು. ಅಡುಗೆಯಲ್ಲಿ ಸಹಾಯ ಮಾಡಲು ನನಗೆ ಅವಕಾಶ ನೀಡಿದರು. ನಾವೆಲ್ಲ ಸೇರಿ ಹರಭಾರಿಯಾಚಿ ಭಜಿ, ತುವರ್ ದಾಲ್ ತಯಾರಿಸಿದೆವು,’ ಎಂದು ಬರೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪಟೋಲೆ ಮತ್ತು ಸಾನಡೆ ಅವರು ‘ಜಾತಿ ತಾರತಮ್ಯ ಮತ್ತು ಅಸ್ಪ್ರಶ್ಯತೆ’ ಕುರಿತಂತೆ ತಮ್ಮ ವೈಯಕ್ತಿಕ ಅನುಭವಗಳನನ್ನು ಹಂಚಿಕೊಂಡರು. ದಲಿತ ಪಾಕ ಪದ್ಧತಿ ಬಗೆಗಿನ ಅರಿವಿನ ಕೊರತೆ ಮತ್ತು ಅದನ್ನು ದಾಖಲಿಸುವಲ್ಲಿ ವಿಫಲರಾಗಿರುವ ಬಗ್ಗೆಯೂ ಚರ್ಚಿಸಿದೆವು. ಬಹುಜನರಿಗೆ ಸಂವಿಧಾನವು ಹಕ್ಕುಗಳನ್ನು ನೀಡಿದ್ದು, ನಾವು ಅದನ್ನು ರಕ್ಷಿಸಬೇಕಿದೆ. ತನ್ನ ಹೃದಯದಲ್ಲಿ ಪ್ರತಿಯೊಬ್ಬ ಭಾರತೀಯನು ಭ್ರಾತೃತ್ವವನ್ನು ಬೆಳೆಸಿಕೊಂಡಾಗ ಮಾತ್ರ ನಿಜವಾದ ಒಳಗೊಳ್ಳುವಿಕೆ ಮತ್ತು ಸಮಾನತೆ ಸಾಧ್ಯವಾಗುತ್ತದೆ’ ಎಂದು ಹೇಳಿದ್ದಾರೆ.