ಬೆಳ್ತಂಗಡಿ: ಕಿತ್ತಳೆ ಹಣ್ಣುಗಳನ್ನು ಮಾರಿ ತನ್ನೂರಿನಲ್ಲಿ ಶಾಲೆ ತೆರೆದು ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಧೃಡ ಸಂಕಲ್ಪದೊಂದಿಗೆ ಕಾರ್ಯ ಸಾಧಿಸಿ ರಾಷ್ಟ್ರದ ಮನೆ ಮಾತಾದ ಅಕ್ಷರ ಸಂತರಾಗಿ, ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಕೊಂಡ ಹರೆಕ್ಕಳ ಹಾಜಬ್ಬರವರಿಗೆ ‘ಹಾಜಬ್ಬ ಅಭಿನಂದನಾ ಸಮಿತಿ’ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ, ಜನತೆಯ ಪರವಾಗಿ ಅಭಿನಂದನಾ ಸಮಾರಂಭ ಇಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.
ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಹಾಗೂ ರೋಟರಿ ಕ್ಲಬ್ ಉಜಿರೆ ಇದರ ಸಹಭಾಗಿತ್ವದಲ್ಲಿ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜರವರು ವಹಿಸಿದರು. ಶಾಸಕ ಹರೀಶ್ ಪೂಂಜರವರು ಕಾರ್ಯಕ್ರಮದಲ್ಲಿರುವ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದರು.
ಹಾಜಬ್ಬ ಅಭಿನಂದನಾ ಸಮಿತಿಯಿಂದ ಹರೇಕಳ ಶಾಲೆಗೆ ಒಂದು ಶಾಲಾ ಕೊಠಡಿ ನಿರ್ಮಾಣ ಕಾರ್ಯಕ್ಕೆ ರೂ.5 ಲಕ್ಷ ಸಹಾಯಧನ ಹಾಗೂ ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಶಾಲೆಗೆ 20 ಸಾವಿರ ಮೌಲ್ಯದ ಕ್ರೀಡಾ ಸಾಮಾಗ್ರಿಗಳು ಮತ್ತು 80 ಸಾವಿರ ಮೌಲ್ಯದ 10 ಜೊತೆ ಪೀಠೋಪಕರಣ ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಹಾಜಬ್ಬರವರನ್ನು ಅಭಿನಂದಿಸುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳು ಹರೇಕಳ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ‘ಪದ್ಮಶ್ರೀ ಪುಶಸ್ತಿ, ಪುರಸ್ಕೃತರಾದ ಅಕ್ಷರ ಸಂತ ಹರೇಕಳ ಹಾಜಬ್ಬ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ ಬಂಟ್ವಾಳ್, ಉಜಿರೆ ಶ್ರೀ ಧ.ಮ ಪದವಿ ಕಾಲೇಜು ಪ್ರಾಂಶುಪಾಲ ಡಾ ಸತೀಶ್ಚಂದ್ರ , ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜು ಪ್ರಾಂಶುಪಾಲ ಎಂ.ಎನ್. ಜೋಸೆಫ್ , ಪುಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಭಟ್ ಕುಳಮರ್ವ, ಬೆಳ್ತಂಗಡಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ| ಆಂಟೊನಿ, ಉಜಿರೆ ಗ್ರಾ.ಪಂ ಅಧ್ಯಕ್ಷ ಪುಷ್ಪಾವತಿ ಆರ್ ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್, ಉಜಿರೆ ಸಂಧ್ಯಾ ಟ್ರೇಡರ್ಸ್ನ ರಾಜೇಶ್, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಅಬೂಬಕ್ಕರ್, ಪುಂಜಾಲಕಟ್ಟೆ ಕಾಲೇಜು ಪ್ರೊಫೆಸರ್ ಸುಮಂತ್ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ರೋಟರಿ ಕ್ಲಬ್ ಸದಸ್ಯರು ಹಾಜಬ್ಬ ಅಭಿಮಾನಿ ಬಳಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.