ಮಂಗಳೂರು; ರಸ್ತೆ ಬದಿಯಲ್ಲಿ ಚರಂಡಿ ಮಾಡುತ್ತಿದ್ದ ವೇಳೆ ಕಾಂಪೌಂಡ್ ಕುಸಿದು ಓರ್ವ ಸಾವನ್ನಪ್ಪಿ, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಸುರತ್ಕಲ್ ನ ಕೃಷ್ಣಾಪುರದ ಕೆಇಬಿ ಬಳಿ ಬುಧವಾರ ನಡೆದಿದೆ.
ಬಜ್ಪೆ ಕರಂಬಾರು ನಿವಾಸಿ ಹನೀಫ್ ಮೃತ ದುರ್ದೈವಿ. ಘಟನೆಯಲ್ಲಿ ಮಣಿ ಎಂಬವರು ಗಾಯಗೊಂಡಿದ್ದಾರೆ. ಕೃಷ್ಣಾಪುರ ನಿವಾಸಿ ಶರೀಫ್ ಎಂಬವರು ರಸ್ತೆ ಬದಿ ಚರಂಡಿ ನಿರ್ಮಾಣದ ಗುತ್ತಿಗೆ ಪಡೆದುಕೊಂಡು ಕೆಲಸ ಮಾಡಿಸುತ್ತಿದ್ದರು ಎನ್ನಲಾಗಿದೆ.
ಹನೀಫ್ ಮತ್ತು ಮಣಿ ಅವರು ಚರಂಡಿ ಅಗೆಯುತ್ತಿದ್ದ ವೇಳೆ ಏಕಾಏಕಿ ಪಕ್ಕದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಕೆಲಸಗಾರರ ಮೇಲೆ ಬಿದ್ದಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಾಗಲೇ ಹನೀಫ್ ಮೃತಪಟ್ಟಿದ್ದರು.
ಮಣಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಹನೀಫ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.