ಮಂಗಳೂರು; ಉಳ್ಳಾಲದಲ್ಲಿ ಮಹಿಳಾ ಕಾನ್ಸ್ಟೇಬಲ್ ಗೆ ನಿವೃತ್ತ ಯೋಧರೊಬ್ಬರು ಲೈಂಗಿಕ ಕಿರುಕುಳ ನೀಡಿದ ಆರೋಪಘಟನೆ ಉಳ್ಳಾಲ ತಾಲೂಕಿನ ಕುಂಪಲದ ಬಗಂಬಿಲ ಎಂಬಲ್ಲಿಂದ ಕೇಳಿ ಬಂದಿದೆ.ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಕುಂಪಲ ಅಮೃತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್ (45) ಕಿರುಕುಳ ನೀಡಿದ ನಿವೃತ್ತ ಯೋಧ.
ಠಾಣೆಯೊಂದರ ಮಹಿಳಾ ಕಾನ್ಸ್ಟೇಬಲ್ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ನಿವೃತ್ತ ಯೋಧ ಪ್ರಶಾಂತ್ ಅವರು, ಆಕೆಯ ಮೈಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆ ಕಿರುಚಾಡಿದಾಗ ಸ್ಥಳೀಯರು ಜಮಾಯಿಸಿ ನಿವೃತ್ತ ಯೋಧನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನು ನಿವೃತ್ತ ಯೋಧ ಪ್ರಶಾಂತ್ ವಿರುದ್ಧ ಈ ಹಿಂದೆ ಹಲವು ಮಂದಿ ವಿವಿಧ ದೂರುಗಳನ್ನು ನೀಡಿದ್ದು, ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ನಿತ್ಯ ಮದ್ಯಪಾನ ಮಾಡಿ ಬಂದು ನೆರೆಮನೆಯವರಿಗೆ ಮತ್ತು ಊರಿನವರಿಗೆ ಕಿರುಕುಳ ನೀಡುವ ಈತನ ವಿರುದ್ಧ ಹಲವಾರು ಜನರು ಪ್ರಕರಣ ದಾಖಲಿಸಿದ್ದಾರೆ.
ಆದರೆ ಈವರೆಗೂ ಆತನ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಹಾಗೂ ಆತನ ಉಪಟಳ ಮುಂದುವರಿದಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಆತನ ವಿರುದ್ಧ ದೆಹಲಿ ಯೋಧರ ಅಸೋಸಿಯೇಷನ್ ನಲ್ಲಿಯೂ ಎರಡು ದೂರುಗಳು ವಿಚಾರಣಾ ಹಂತದಲ್ಲಿವೆ ಎನ್ನಲಾಗಿದೆ.