ಪುತ್ತೂರು: ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರು ಸಮೀಪದ ಕೂರೇಲು ಬಳಿ ತೆಂಗಿನ ಮರ ಮನೆ ಮೇಲೆ ಬಿದ್ದ ಪರಿಣಾಮ ಮನೆ ಜಖಂಗೊಂಡಿದೆ.
ಹಂಚಿನ ಮನೆಯ ಮೇಲೆ ತೆಂಗಿನ ಮರ ಬಿದ್ದಿದ್ದು ಮನೆ ಮಾಲೀಕ ಬಾಲಕೃಷ್ಣ ರೈ ಎಂಬವರಿಗೆ ಗಾಯಗಳಾಗಿವೆ.
ಮನೆಯ ಚಾವಣಿ ಸಂಪೂರ್ಣವಾಗಿ ಹಾನಿಯಾಗಿ ಹಂಚುಗಳು ಪುಡಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ.
ಮೊಮ್ಮಕ್ಕಳ ಜತೆ ಮನೆಯೊಳಗಿದ್ದ ಬಾಲಕೃಷ್ಣ ರೈ ಅವರ ತಲೆಯ ಮೇಲೆ ಹಂಚಿನ ತುಂಡು ಬಿದ್ದು ಗಾಯವಾಗಿದ್ದು, ಮೊಮ್ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡಿರುವ ಬಾಲಕೃಷ್ಣ ರೈ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಕುಟುಂಬ ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ನಿಸರ್ಗ ಪ್ರಿಯ, ಕಂದಾಯ ನಿರೀಕ್ಷಕ ಗೋಪಾಲ್, ಆರ್ಯಾಪು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ವಾಗ್ಲೆ, ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಗ್ರಾಮಕರಣಿಕರಾದ ಅಶ್ವಿನಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.