ಕಾರ್ಕಳ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚು ಮದ್ದು ನೀಡಿದ ಬಳಿಕ ನಾಲ್ಕೂವರೆ ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀಯಾನ್ ಮೃತ ಮಗು. ಮಗುವಿಗೆ ಕಾರ್ಕಳ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಏ.7ರಂದು ಮಧ್ಯಾಹ್ನ 12.30ರ ಸುಮಾರಿಗೆ ತಿಂಗಳ ಚುಚ್ಚು ಮದ್ದು ನೀಡಿದ್ದರು. ನಂತರ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದು, ಮಧ್ಯಾಹ್ನ 3 ಗಂಟೆಯ ವೇಳೆ ಮಗುವಿನ ಬಾಯಿಯಲ್ಲಿ ನೊರೆ ಬಂದ್ದು ತೀವ್ರವಾಗಿ ಅಸ್ವಸ್ಥಗೊಂಡಿತ್ತೆನ್ನಲಾಗಿದೆ. ಮನೆಯವರು ಕೂಡಲೇ ಮಗುವನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಸಂಜೆ 6:50ಕ್ಕೆ ಮಗು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ರೆಂಜಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಚುಚ್ಚುಮದ್ದು ನೀಡಿದ ಅಡ್ಡ ಪರಿಣಾಮದಿಂದಲೇ ಮಗು ಮೃತಪಟ್ಟಿದ್ದು, ಮಗುವಿನ ಮರಣದಲ್ಲಿ ಸಂಶಯ ಇದೆ ಎಂದು ಮಗುವಿನ ಪೋಷಕರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.