ಬೆಳ್ಳಿಪ್ಪಾಡಿ : ಕೋಡಿಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೆಳ್ಳಿಪ್ಪಾಡಿ ಗ್ರಾಮದ ಗಾಣದಕೊಟ್ಯ ಎಂಬಲ್ಲಿ ಎರಡು ತಿಂಗಳ ಮಗುವೊಂದು ಸಾವನ್ನಪ್ಪಿದೆ.
ಇಲ್ಲಿನ ಚೆನ್ನಪ್ಪ ದೇವಾಡಿಗ ಎಂಬವರ ಮಗಳು ಶ್ರೀಲತಾ ಅವರ ಎರಡು ತಿಂಗಳ ಮಗು ಅಕ್ಷಜ ಮೃತಪಟ್ಟಿದೆ. ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಲತಾ ಅವರು ನರ್ಸ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಅವರನ್ನು ಮಂಗಳೂರಿನ ಅನೀಶ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮೊದಲ ಹೆರಿಗಾಗಿ ಶ್ರೀಲತಾ ತವರು ಮನೆಗೆ ಬಂದಿದ್ದರು.ಅದರಂತೆ ಎರಡು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಕೆಲವು ದಿನಗಳಿಂದ ಮಗುವಿಗೆ ವಾಂತಿ ಹಾಗೂ ಕಫದ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಮಗುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಇನ್ನು ಮಗು ಸಾವನ್ನಪ್ಪಿದ ವಿಚಾರ ತಿಳಿದು ಮಗು ಕೊರೊನಾದಿಂದ ಸಾವನ್ನಪ್ಪಿದೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.