ಸುಬ್ರಹ್ಮಣ್ಯ : ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನಲೆಯಲ್ಲಿ ದೇವಚಳ್ಳದ ವ್ಯಕ್ತಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶ ನೀಡಿದೆ.
ಪ್ರಮೋದ್ ಕುಮಾರ್ ಇವರು ಮೂಲತಃ ದೇವಚಳ್ಳ ಗ್ರಾಮದ ಕನ್ನಡಕಜೆ ದೇವದವರು. ಅವರು ಬೆಂಗಳೂರಿನ ಜ್ಯುವೆಲ್ಲರ್ಸ್ ವೊಂದರಲ್ಲಿ ಉದ್ಯೋಗಿಯಾಗಿದ್ದು ಅವರು ತಳೂರಿನ ಬಾಲಕೃಷ್ಣ ಅವರಿಂದ ರೂ.4 ಲಕ್ಷವನ್ನು ಸಾಲವಾಗಿ ಪಡೆದಿದ್ದರು. ಸಿಟಿಜನ್ ಕೋ ಆಪರೇಟಿವ್ ಬ್ಯಾಂಕ್ ರಾಜಾಜಿನಗರ ಬೆಂಗಳೂರು ಶಾಖೆಯಲ್ಲಿ ಅದರ ಮರುಪಾವತಿಗಾಗಿ ರೂ .2 ಲಕ್ಷದ ಎರಡು ಚೆಕ್ ಗಳನ್ನು ನೀಡಿದ್ದರು .
ಆದರೆ ಬಾಲಕೃಷ್ಣರವರು ಹಣ ಸಾಲವಾಗಿ ನೀಡಿದ್ದ ಈ ಚೆಕ್ ಗಳನ್ನು ನಗದೀಕರಣಕ್ಕೆ ಹಾಕಿದಾಗ ಅದು ಅಮಾನ್ಯಗೊಂಡಿತ್ತು. ಬಳಿಕ ಅವರು ಸುಳ್ಯ ಸಿವಿಲ್ ಜಡ್ಜ್ ಹಿರಿಯ ವಿಭಾಗದ ನ್ಯಾಯಾಲಯದಲ್ಲಿ ವರ್ಗಾವಣೆ ದಸ್ತಾವೇಜು ಕಾಯ್ದೆಯ ಕಲಂ 138 ರ ಅಪರಾಧದ ಕೇಸನ್ನು ದಾಖಲಿಸಿದರು.
ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯದ ಹಿರಿಯ ವಿಭಾಗದ ನ್ಯಾಯಾಧೀಶರಾದ ಸೋಮಶೇಖರ್ ಎಸ್ ರವರು ಕೈಗೆತ್ತಿಕೊಂಡು ದೂರುದಾರ ಮತ್ತು ಆರೋಪಿ ಪರ ವಕೀಲರ ವಾದ ವಿವಾದಗಳನ್ನು ಆಲಿಸಿ ಆರೋಪಿಯ ಮೇಲಿನ ಆರೋಪವು ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ನಾಲ್ಕು ಲಕ್ಷದ ಹತ್ತು ಸಾವಿರ ರೂ ದಂಡ ವಿಧಿಸಿದೆ
ದಂಡ ತೀರಿಸಲು ತಪ್ಪಿದಲ್ಲಿ ಆರು ತಿಂಗಳ ಸಾದಾ ಶಿಕ್ಷೆಯನ್ನು ನೀಡಿ ಆದೇಶಿಸಿದ್ದಾರೆ.