ಬೆಳ್ತಂಗಡಿ: ದಲಿತ ಮಹಿಳೆಯ ಭೂಮಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಎಚ್ ಪಿ ಮುಖಂಡ, ಬೆಳ್ತಂಗಡಿಯ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬೆಳ್ತಂಗಡಿ ತಹಶೀಲ್ದಾರ್ ಸೇರಿದಂತೆ ಏಳು ಮಂದಿ ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಾಯ ಗ್ರಾಮದ ಕೆರೆಕೋಡಿ ನಿವಾಸಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ A1 ಆರೋಪಿ ಆಗಿದ್ದು, ಉಳಿದಂತೆ A2 ಬೆಳ್ತಂಗಡಿ ತಹಶೀಲ್ದಾರ್,A3 ಕರಾಯ ನಿವಾಸಿ ಸುರೇಶ್,A4 ಕರಾಯ ನಿವಾಸಿ ಗಿರೀಶ್,A5 ಕರಾಯ ನಿವಾಸಿ ಶೇಖರ್,A6 ತಣ್ಣಿರುಪಂಥ ನಿವಾಸಿ ನಝೀರ್,A7 ಬೆಳ್ತಂಗಡಿ ರಿಜಿಸ್ಟ್ರರ್ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.ಕರಾಯ ಗ್ರಾಮದ ಕೆರೆಕೋಡಿ ನಿವಾಸಿ ವಾರಿಜ ಅವರಿಗೆ ವಂಚಿಸಿ ಅಕ್ರಮವಾಗಿ ಅವರ ಭೂಮಿಯನ್ನು ಪರಭಾರೆ ಮಾಡಿದ ಆರೋಪದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅನಕ್ಷರಸ್ಥರಾದ ವಾರಿಜ ಅವರ ತಂದೆ ಬಾಬು ನಾಯ್ಕ ಅವರಿಗೆ ಭೂ ನ್ಯಾಯ ಮಂಡಳಿ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಸರ್ವೆ ನಂಬರ್ 13/4ರಲ್ಲಿ 1.01 ಎಕರೆ, 13/3ರಲ್ಲಿ 1.56 ಎಕರೆ, ಸರ್ವೆ ನಂಬರ್ 11/4ರಲ್ಲಿ 0.37 ಎಕರೆ, ಸರ್ವೆ ನಂಬರ್ 11/2ರಲ್ಲಿ 0.34 ಎಕರೆ, ಸರ್ವೆ ನಂಬರ್ 13/5ರಲ್ಲಿ 0.20 ಎಕರೆ ಜಮೀನು ಮಂಜೂರು ಮಾಡಿತ್ತು.
ಬಾಬು ನಾಯ್ಕ ಮೃತಪಟ್ಟ ಬಳಿಕ ಅವರಿಗೆ ಮಂಜೂರಾದ ಜಮೀನಿನ ವಿಭಜನೆ ಸಂಬಂಧ ಬೆಳ್ತಂಗಡಿ ಸಿವಿಲ್ ಜಡ್ಜ್ ಅವರ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಈ ಪ್ರಕರಣ ತನಿಖಾ ಹಂತದಲ್ಲಿದೆ. ಈ ಮಧ್ಯೆ ವಕೀಲರೂ ಆಗಿರುವ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಪ್ರಕರಣವನ್ನು ರಾಜಿಯಲ್ಲಿ ಮುಗಿಸುವುದಾಗಿಯೂ ಎಲ್ಲಾ ದಾಖಲೆಗಳನ್ನು ನಾನೇ ಮಾಡಿಕೊಡುತ್ತೇನೆ ಎಂದು ವಾರಿಜ ಅವರನ್ನು ನಂಬಿಸಿ ಅವರನ್ನು ಕಚೇರಿಗೆ ಕರೆಸಿಕೊಂಡಿದ್ದಾರೆ. ಅಲ್ಲಿ ವಾರಿಜ ಅವರ ನೆರೆ ಮನೆಯವರಾದ ಸದಾನಂದ ಮತ್ತು ಸುರೇಶ್ ಅವರ ಪಹಣಿಯು ವ್ಯತ್ಯಾಸವಾಗಿದೆ ಎಂದು ಸುಳ್ಳು ಹೇಳಿ ನೋಂದಣಿ ಕಚೇರಿಗೆ ಕರೆದು ಕೊಂಡುಹೋಗಿ ಸಹಿ ಹಾಕಿಸಿಕೊಂಡಿದ್ದಾರೆ. ಬಳಿಕ ಬೆಳ್ತಂಗಡಿ ತಾಲೂಕು ತಣ್ಣೀರು ಪಂತ ಗ್ರಾಮದ ಅಳಕೆ ಮನೆಯ ನಝೀರ್ ಅವರು, ನಿಮ್ಮ ಜಮೀನನ್ನು ನಾನು ಖರೀದಿ ಮಾಡಿದ್ದೇನೆ ಎಂದು ತಿಳಿಸಿದಾಗ ನನಗೆ ಮೋಸ ಮಾಡಿರುವುದು ತಿಳಿಯಿತು. ಆಗ ದಾಖಲೆ ಪರಿಶೀಲಿಸಿದಾಗ ಸದಾನಂದ, ಸುರೇಶ್ ಹಾಗೂ ನಝೀರ್ ಅವರಿಗೆ ಜಮೀನು ಮಾರಿದಂತೆ ನಕಲಿ ದಾಖಲೆ ಸೃಷ್ಟಿಸಿರುವುದು ತಿಳಿಯಿತು. ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳಬೇಕು ಎಂದು ಸಂತ್ರಸ್ತೆ ವಾರಿಜ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಅವರು ನೀಡಿದ ದೂರಿನನ್ವಯ IPC 1860(U/s-465,468,471,420) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.