ಉಡುಪಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 10 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಕುಂದಾಪುರದ ತ್ರಾಸಿ ಗ್ರಾಮದಲ್ಲಿ ನಡೆದಿದೆ. ತ್ರಾಸಿ ಗ್ರಾಮದ ರೆಹಾನ್ ಅಹ್ಮದ್ ಅವರಿಗೆ ಲತೇಶ್ ಸಂಜೀವ್ ಕುಂಬ್ಲೆ ಎನ್ನುವ ವ್ಯಕ್ತಿ ಸರಕಾರಿ ಉದ್ಯೋಗ ಕೊಡಿಸುವುದಾಗಿ 10 ಲಕ್ಷ ರೂ. ವಂಚಿಸಿದ್ದಾನೆಂದು ಪ್ರಕರಣ ದಾಖಲಾಗಿದೆ.
ಒಂದು ವರ್ಷದ ಹಿಂದೆ ಪರಿಚಿತನಾದ ಲತೇಶ್ ಸಂಜೀವ ಕುಂಬ್ಲೆ , ತನಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿರುವುದಾಗಿ, ಅವರ ಜತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತೋರಿಸಿದ್ದ.ಅನಂತರ ರೆಹಾನ್ ಅವರ ಅಕ್ಕ ಸಬೀನಾ ಅಖ್ತರ್ ಅವರಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ 10 ಲಕ್ಷ ರೂ. ಹಣವನ್ನು ಕೇಳಿದ್ದು, ರೆಹಾನ್ ಅಹಮ್ಮದ್ ಆ ಹಣವನ್ನು ಬ್ಯಾಂಕ್ ಮೂಲಕ ವರ್ಗಾಯಿಸಿದ್ದರು.
ಹೇಳಿದಂತೆ ಕೆಲಸ ಕೊಡಿಸಿಲ್ಲವೆಂದು ಹಣ ಕೇಳಿದಾಗ 6 ಲಕ್ಷ ರೂ. ಮರಳಿ ನೀಡುವುದಾಗಿ ಕೊಟ್ಟ ಚೆಕ್ ಹಣವಿಲ್ಲವೆಂದು ಮರಳಿ ಬಂದಿದೆ. ನ್ಯಾಯಾಲಯದಲ್ಲಿ ದಾಖಲಾದ ಖಾಸಗಿ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.