ಕಡಬ: ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಮಹಿಳೆಯ ಮೇಲೆ ಸಮೀಪದ ಅಂಗಡಿಯ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿರುವ ಆರೋಪ ವ್ಯಕ್ತವಾಗಿದ್ದು, ಈ ಸಂಬಂಧ ಎರಡು ತಂಡಗಳ ಐವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಮುಳಿಮಜಲು ಎಂಬಲ್ಲಿ ರವಿವಾರದಂದು ನಡೆದಿದೆ.
ಜಗನ್ನಾಥ ಎಂಬವರ ಪತ್ನಿ ಪ್ರಮೋದ ಮುಳಿಮಜಲಿನಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದು, ಇವರ ಮೇಲೆ ಸಮೀಪದ ಮಾಂಸ ಹಾಗೂ ಇತರ ಅಂಗಡಿ ವ್ಯಾಪಾರ ನಡೆಸುತ್ತಿರುವ ರಾಜುಮ್ಯಾಥ್ಯ ಎಂಬವರು ವೀಡಿಯೋ ಮಾಡಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ರಕ್ಷಣೆಗೆ ಬಂದ ತನ್ನ ಮಗಳ ಮೇಲೆ ಕೈ ಹಾಕಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪ್ರಮೋದ ಹಾಗೂ ಅವರ ಪುತ್ರಿ ಪ್ರಜಾರಶ್ಮಿ ಎಂಬವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದೇ ಘಟನೆಗೆ ಸಂಬಂಧಿಸಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ರಾಜು ಮ್ಯಾಥ್ಯ, ಅವರ ಪತ್ನಿ ಶಾಲಿ ಮ್ಯಾಥ್ಯ, ಅವರ ಪುತ ರಕ್ಷಿತ್ ಮಾಣಿ ಅವರುಗಳು ಕೂಡ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಪ್ರಮೋದ ಅವರು,ರವಿವಾರದಂದು ಬೆಳಿಗ್ಗೆ ನಾನು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ವೇಳೆ ಏಕಾಏಕಿ ಬಂದ ರಾಜ್ಯ ಮ್ಯಾಥ್ಯ ಅವರ ಮಗ ರಕ್ಷಿತ್ ಮಾಣಿ ನಮ್ಮ ವೀಡಿಯೋ ಮಾಡಿದ. ಇದೇ ವೇಳೆ ಬಂದ ರಾಜುಮ್ಯಾಥ್ಯ ನನಗೆ ಹಲ್ಲೆ ಮಾಡಿದ, ನಾನು ನನ್ನ ಮಗಳನ್ನು ಕರೆದೆ, ಅವಳು ಬಂದ ಕೂಡಲೇ ಅವಳ ಮೇಲೆ ಕೈಹಾಕಿ ಕಿರುಕುಳ ನೀಡಿದ್ದಾನೆ, ನಾನು ಅಲ್ಲಿ ವ್ಯಾಪಾರ ಮಾಡದಂತೆ ಮಾಡುವುದೇ ರಾಜುನ ಉದ್ದೇಶವಾಗಿದೆ, ಈತ ನನಗೆ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದಾನೆ, ನಮ್ಮ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಮೋದ ಅವರು ಆಗ್ರಹಿಸಿದ್ದಾರೆ.
ಇತ್ತ ರಾಜುಮ್ಯಾಥ್ಯ ಅವರು ಹೇಳಿಕೆ ನೀಡಿ, ಯಾವುದೇ ಪರವಾನಿಗೆ ಇಲ್ಲದೆ ವೀಕೆಂಡ್ ಕರ್ಪ್ಯೂ ವೇಳೆಯೂ ವ್ಯಾಪಾರ ನಡೆಸುತ್ತಿದ್ದಾರೆ, ನನ್ನ ಅಂಗಡಿಯಲ್ಲಿ ದನದ ಮಾಂಸ ಇದೆ, ಎಂದೆಲ್ಲ ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ, ನಾನು ಅವರಿಗೆ ಸಾಲ ನೀಡಿದ್ದು, ಅದನ್ನು ಹಿಂತಿರುಗಿಸಲಿಲ್ಲ. ಈ ಬಗ್ಗೆ ನಾನು ಕೋರ್ಟ್ ಕೇಸು ಹಾಕಿದ್ದೇನೆ, ಇದಕ್ಕಾಗಿಯೇ ಅವರು ನನ್ನ ಮೇಲೆ, ಹಾಗೂ ನನ್ನ ಪತ್ನಿ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ, ಈ ಬಗ್ಗೆ ಸೂಕ್ತ ತನಿಖೆಯಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.