ಕಡಬ: ಇಲ್ಲಿನ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಗುಡ್ಡದಲ್ಲಿ ಗುಂಡಿ ತೆಗೆಯುವ ವೇಳೆ ಗುಹೆ ಪತ್ತೆಯಾಗಿದ್ದು, ಅದರಲ್ಲಿ ಪ್ರಾಚೀನ ಮಣ್ಣಿನ ಪರಿಕರಗಳು ಪತ್ತೆಯಾಗಿವೆ.
ಕಲ್ಲೆಂಬಿ ವಿಶ್ವನಾಥ ಗೌಡ ಅವರ ಅಡಿಕೆ ತೋಟ ಮಾಡುವ ಉದ್ದೇಶದಿಂದ ಗುಂಡಿ ತೆಗೆಯುವಾಗ ಈ ಗುಹೆ ಪತ್ತೆಯಾಗಿದೆ.
ಅಡಿಕೆ ತೋಟಕ್ಕೆ ಗುಂಡಿ ಅಗೆಯುವ ವೇಳೆ ಮಣ್ಣಿನಲ್ಲಿ ಸಡಿಲ ಭಾಗ ಗೋಚರಿಸಿದ್ದು, ಗುಹೆಯಾಕಾರ ಮಾದರಿ ಪತ್ತೆಯಾಗಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಣ್ಣಿನ ಮಡಿಕೆ, ಬಟ್ಟಲು, ಸಣ್ಣ-ಪುಟ್ಟ ಪಾತ್ರೆಗಳ ಅವಶೇಷಗಳು ಪತ್ತೆಯಾಗಿವೆ. ವಿಶೇಷ ರೀತಿಯ ಗುಹೆಯಲ್ಲಿ ಎರಡು ಅಂತರದ ಕೋಣೆಗಳಿರುವಂತೆ ಕಂಡುಬಂದಿದೆ.
ಪರಿಕರ ಅಧ್ಯಯನ ಹಂತದಲ್ಲಿ ಹಿಂದಿನ ಕಾಲದಲ್ಲಿ ಉದ್ದೇಶಪೂರ್ವಕವಾಗಿ ಸಣ್ಣ ಮಾದರಿಯ ಗುಹೆ ತೋಡಿ ಪರಿಕರಗಳನ್ನು ಇದರಲ್ಲಿ ಹೂತು ಮುಚ್ಚಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಉಡುಪಿಯ ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಪ್ರಾಚ್ಯವಸ್ತು ಸಂಶೋಧಕ ಪ್ರೊ| ಟಿ. ಮುರುಗೇಶಿ ಅವರು ಸ್ಥಳಕ್ಕೆ ಆಗಮಿಸಿ ಪರಿಕರಗಳನ್ನು ಸಂಗ್ರಹಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಈಗಾಗಲೇ ಪರಿಕರಗಳನ್ನು ತೊಳೆದು ಸ್ವಚ್ಛಗೊಳಿಸಿದ್ದೇವೆ. 2-3 ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.