ಬೆಳ್ತಂಗಡಿ;”ಆತ್ಮೀಯ ಸಂಬಂಧವೇ ಸಹಕಾರಿ ಸಂಸ್ಥೆಗಳ ಅಡಿಪಾಯವಾಗಿದ್ದು, ಅದು ನಮ್ಮ ಜಿಲ್ಲೆಯಲ್ಲಿ ಉತ್ತಮವಾಗಿದೆ.ಇಲ್ಲಿನ ಆರ್ಥಿಕ ಶಿಸ್ತು ದೇಶಕ್ಕೆ ಮಾದರಿಯಾಗಿದೆ” ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಗುರುವಾರ ಬೆಳ್ತಂಗಡಿಯಲ್ಲಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘದ ‘ಆಶಾಕಿರಣ’ ವಾಣಿಜ್ಯ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
“ಕಡಿಮೆ ಸಂಖ್ಯೆಯಲ್ಲಿರುವ ಕ್ರೈಸ್ತರು ದೊಡ್ಡ ಆರ್ಥಿಕ ಸಂಸ್ಥೆಯನ್ನು ಕಟ್ಟುವ ಮೂಲಕ ಸಮಾಜಕ್ಕೆ ಬಲ ಒದಗಿಸಿದ್ದಾರೆ. ಸಹಕಾರ ಸಂಘಗಳು ಆರ್ಥಿಕ ಸಬಲೀಕರಣದ ಜತೆ ಲಕ್ಷಾಂತರ ಮಂದಿಗೆ ಉದ್ಯೋಗ ಭದ್ರತೆಯನ್ನು ನೀಡುತ್ತವೆ. ಕ್ರೈಸ್ತ ಸಮಾಜ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜತೆ ಸಹಕಾರ ಕ್ಷೇತ್ರಕ್ಕೂ ಬಲ ನೀಡುತ್ತಿರುವುದು ಶ್ಲಾಘನೀಯ. ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘ ಮುಂದಿನ ದಿನಗಳಲ್ಲಿ ಬ್ಯಾಂಕ್ ಆಗಿ ಪರಿವರ್ತನೆ ಹೊಂದಲಿ” ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಹೆನ್ರಿ ಲೋಗೋ ಮಾತನಾಡಿ “1997-98 ರಲ್ಲಿ 604 ಸದಸ್ಯರೊಂದಿಗೆ 6 ಲಕ್ಷ ರೂ. ಪಾಲು ಬಂಡವಾಳ ಹೊಂದಿ ಆರಂಭವಾದ ಸಂಸ್ಥೆ ಪ್ರಸ್ತುತ 2700 ಸದಸ್ಯರನ್ನು 93 ಲಕ್ಷ ರೂ. ಬಂಡವಾಳವನ್ನು ಹೊಂದಿದೆ. 95 ಕೋಟಿ ರೂ. ಠೇವಣಿ ಸಂಗ್ರಹದ ಜತೆ 100ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು ಕಳೆದ ಸಾಲಿನಲ್ಲಿ 3 ಕೋಟಿ ರೂ. ಲಾಭ ಗಳಿಸಿ ಸದಸ್ಯರಿಗೆ 25 ಶೇ. ಡಿವಿಡೆಂಟ್ ನೀಡಲಾಗಿದೆ.ನಾರಾವಿ ಅಳದಂಗಡಿ, ವೇಣೂರುಗಳಲ್ಲಿ ಶಾಖೆಯನ್ನು ಹೊಂದಿದ್ದು ವ್ಯವಹಾರದ ಜತೆ ವಿದ್ಯಾರ್ಥಿ ವೇತನ, ಧನಸಹಾಯ, ವೈದ್ಯಕೀಯ ನೆರವು, ಧಾರ್ಮಿಕ ಕೆಲಸಗಳಿಗೆ ಸಹಾಯ ಹಸ್ತ ನೀಡುತ್ತಿದೆ” ಎಂದರು.
ಮಂಗಳೂರು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸಂಘದ ಪ್ರಧಾನ ಕಚೇರಿ ಉದ್ಘಾಟಿಸಿದರು. ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ., ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಆಲ್ ಇಂಡಿಯಾ ಕೆಥೋಲಿಕ್ ಯೂನಿಯನ್ ಕರ್ನಾಟಕ ಪ್ರಾಂತ್ಯದ ನಿಕಟ ಪೂರ್ವ ಅಧ್ಯಕ್ಷ ಸೇವಿಯರ್ ಪಾಲೇಲಿ ಸಂಘದ ನಾನಾ ವಿಭಾಗಗಳನ್ನು ಉದ್ಘಾಟಿಸಿದರು.
ಹೋಲಿ ರೆಡಿಮೇಡ್ ಶಾಲೆಯ ಪ್ರಿನ್ಸಿಪಾಲ್ ಫಾ.ಕ್ಲಿಫರ್ಡ್ ಪಿಂಟೋ, ಸಂಘದ ಉಪಾಧ್ಯಕ್ಷ ಡೆನಿಸ್ ಸಿಕ್ವೇರಾ, ನಿರ್ದೇಶಕರಾದ ಜೇಮ್ಸ್ ಡಿಸೋಜಾ,ಜೋಸೆಫ್ ಪೀಟರ್ ಸಲ್ಡಾನ, ಹೆರಾಲ್ಡ್ ಪಿಂಟೋ, ಅಲ್ಫೋನ್ಸ್ ರೋಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೋ, ಪ್ರಸಾದ್ ಪಿಂಟೋ,ರಫಾಯಲ್ ವೇಗಸ್,ಪೌಲಿನ್ ರೇಗೋ,ಪ್ಲಾವಿಯಾ ಡಿಸೋಜಾ ನಾಮನಿರ್ದೇಶಕರಾದ ವಿನಯ್ ಜಾನ್ಸನ್ ಡಿಸೋಜಾ,ರಿಯೋ ಮೈಕಲ್ ರೋಡ್ರಿಗಸ್,ಸಿಇಒ ಐವನ್ ಗೊನ್ಸಾಲ್ವಿನ್ ಉಪಸ್ಥಿತರಿದ್ದರು .ಮಡಂತ್ಯಾರು ಕಾಲೇಜಿನ ಉಪನ್ಯಾಸಕ ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಕಟ್ಟಡದ ಇಂಜಿನಿಯರ್ ಅಲೆನ್ ಬ್ಯಾಪ್ಟಿಸ್ಟ್ ಡಿಸೋಜಾ, ಗುತ್ತಿಗೆದಾರ ಜೆರಾಲ್ಡ್ ಮೆಲ್ವಿನ್ ಫೆರ್ನಾಂಡಿಸ್ ಅವರನ್ನು ಗೌರವಿಸಲಾಯಿತು.