ಪುತ್ತೂರು: ದಲಿತ ಸಮುದಾಯಕ್ಕೆ ಸೇರಿದ ಯುವತಿಯ ಹೆಸರಿನಲ್ಲಿ ನಕಲಿ ಸಹಿ ಬಳಸಿ ಕೆಯ್ಯೂರು ಗ್ರಾಮದ ಕಣಿಯೂರಿನ ಚೆನ್ನಪ್ಪ ಅಜಿಲಾಯ ಎಂಬವರ ಮೇಲೆ ಸುಳ್ಳು ದೂರು ನೀಡಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಎಚ್ಚರಿಸಿದ್ದಾರೆ.
ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚೆನ್ನಪ್ಪ ಅಜಿಲಾಯ ಕೆಎಸ್ಆರ್ ಟಿಸಿ ಬಸ್ ಚಾಲಕರಾಗಿದ್ದು, ಅವರ ತೇಜೋವಧೆ ಮಾಡುವ ನಿಟ್ಟಿನಲ್ಲಿ ದಲಿತ ಸಮುದಾಯದವರಾದ ಜಯ ಅವರ ಹೆಸರನ್ನು ಬಳಸಿಕೊಂಡು ತನಗೆ ದೌರ್ಜನ್ಯವಾಗಿದೆ ಎಂದು ಸಾರಿಗೆ ಸಚಿವರ ಸಹಿತ ಮುಖ್ಯ ಮಂತ್ರಿಗಳ ಕಾರ್ಯದರ್ಶಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸುಳ್ಳು ದೂರನ್ನು ನೀಡಲಾಗಿದೆ. ಈ ಬಗ್ಗೆ ಊರಿನಲ್ಲಿ ಇಲ್ಲ ಸಲ್ಲದ ಅಪಪ್ರಚಾರ ನಡೆದು ಯುವತಿಗೂ ಅನ್ಯಾಯವಾಗಿದೆ. ಯುವತಿಯು ಠಾಣೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ನಾನು ಯಾವುದೇ ದೂರು ನೀಡಿರುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ, ಜಿಲ್ಲಾ ಉಪಾಧ್ಯಕ್ಷ ಧನಂಜಯ ಬಲ್ನಾಡು, ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಉಪಾಧ್ಯಕ್ಷ ಮನೋಹರ ಕೋಡಿಜಾಲು ಮತ್ತು ಚೆನ್ನಪ್ಪ ಅಜಿಲಾಯ ಉಪಸ್ಥಿತರಿದ್ದರು.


