ಮಂಗಳೂರು: ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ಗೆ ದಾರಿ ಬಿಟ್ಟು ಕೊಡದ ಕಾರು ಚಾಲಕನ ವಿರುದ್ಧ ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಕೋಟೆಕಾರು ನಿವಾಸಿ ಚರಣ್ ರಾಜ್ (28 ವ) ಬಂಧಿತ. ಸೋಮವಾರ ಸಂಜೆ ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ತುರ್ತುಚಿಕಿತ್ಸೆಗಾಗಿ ರೋಗಿಯನ್ನು ಆಂಬುಲೆನ್ಸ್ನಲ್ಲಿ ಸಾಗಿಸಲಾಗುತ್ತಿತ್ತು. ಈ ಸಂದರ್ಭ ಇರ್ಟಿಗಾ KA19 MJ 8924 ಕಾರಿನ ಚಾಲಕನು ಬೇಜವಾಬ್ದಾರಿಯಾಗಿ ವರ್ತಿಸಿ ಆಂಬ್ಯುಲೆನ್ಸ್ ಹಾದಿಗೆ ಅಡ್ಡವಾಗಿ ಚಲಿಸುತ್ತಾ ರೋಗಿ ಕೊಂಡೊಯ್ಯಲು ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಅಡ್ಡಿಪಡಿಸಿದ್ದನು.
ರಸ್ತೆಯಲ್ಲಿ ಇತರ ವಾಹನಗಳು ಬದಿಗೆ ಸರಿದು ಆಂಬುಲೆನ್ಸ್ಗೆ ದಾರಿ ಮಾಡಿ ಕೊಡುತ್ತಿದ್ದರೂ, ಕಾರಿನ ಚಾಲಕ ಅಡ್ಡಾದಿಡ್ದಿಯಾಗಿ ಚಲಿಸಿ, ಆಂಬುಲೆನ್ಸ್ ನ ಮುಂದೆ ಮತ್ತಷ್ಟು ವೇಗವಾಗಿ ಸಾಗಿದ್ದಾನೆ. ಇದೆಲ್ಲವೂ ಆಂಬುಲೆನ್ಸ್ನಲ್ಲಿ ಇದ್ದವರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನೆಟ್ಟಿಗರು ಕಾರು ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಅದರಂತೆ ಮಂಗಳವಾರ ನಾಗುರಿ ಸಂಚಾರಿ ಠಾಣಾ ಪೊಲೀಸರು, ಕಾರು ಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಿವಿಯಲ್ಲಿ ಇಯರ್ ಫೋನ್ ಇಟ್ಟು ಕಾರು ಚಲಾವಣೆ ನಡೆಸುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾನೆ.