ಬಜ್ಪೆ: ಚಲಿಸುತ್ತಿದ್ದ ಕಾರೊಂದರಲ್ಲಿ ಶಾಟ್ ಸರ್ಕ್ಯೂಟ್ ಆದ ಕಾರಣ ಆಕಸ್ಮಿಕ ಬೆಂಕಿ ತಗುಲಿ ಕ್ಷಣಮಾತ್ರದಲ್ಲಿ ಕಾರು ಹೊತ್ತಿ ಉರಿದ ಘಟನೆ ಕಟೀಲು ಸಮೀಪದ ಎಕ್ಕಾರು ಅರಸುಲೆ ಪದವು ಎಂಬಲ್ಲಿ ನಡೆದಿದೆ. ಬೆಂಕಿ ಹೊತ್ತಿಕೊಂಡ ಕೂಡಲೆ ಕಾರಿನಿಂದ ಹೊರಗೆ ಜಿಗಿದ ಪರಿಣಾಮ ಅದೃಷ್ಟವಶಾತ್ ಕಾರಲ್ಲಿದ್ದವರಿಗೆ ಯಾವುದೇ ಅಪಾಯವಾಗಲಿಲ್ಲ.
ಕಾರ್ ನಲ್ಲಿದ್ದವರು ಬೆಳ್ತಂಗಡಿ ಮೂಲದವರು ಎಂದು ತಿಳಿದುಬಂದಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದವರು ಹೊರಗಡೆ ಬರುವಷ್ಟರಲ್ಲಿ ಬೆಂಕಿಯ ಜ್ವಾಲೆ ಇಡೀ ಕಾರನ್ನು ಆವರಿಸಿದ್ದು ಜನವಸತಿ ಇಲ್ಲದ ಪ್ರದೇಶವಾದ್ದರಿಂದ ಯಾರೂ ಇರಲಿಲ್ಲ ಎನ್ನಲಾಗಿದೆ. ಬಳಿಕ ಸ್ಥಳೀಯ ನಿವಾಸಿ ಸ್ಟ್ಯಾನಿ ಪಿಂಟೋ ಎಂಬವರು ತಕ್ಷಣ ಕಾರ್ಯಪ್ರವರ್ತರಾಗಿ ಕಟೀಲ್ ಯತೀಶ್ ಶೆಟ್ಟಿಯವರ ನೀರಿನ ಟ್ಯಾಂಕರ್ ಕರೆಸಿ ಬೆಂಕಿ ನಂದಿಸುವಲ್ಲಿ ಶ್ರಮ ವಹಿಸಿದ್ದಾರೆ.
ಅಷ್ಟರಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಸ್ಥಳಕ್ಕೆ ಬಜಪೆ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.