ಮಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ಪೆಟ್ರೋಲ್ ಬಂಕ್ ನ ಹೊರಗಡೆ ರಸ್ತೆಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಒಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ರೂಟ್ ನಂಬರ್ – 15 ರ ಸ್ಟೇಟ್ ಬ್ಯಾಂಕ್- ಸುರತ್ಕಲ್ ನಡುವೆ ಸಂಚರಿಸುವ ರಾಜಲಕ್ಷ್ಮಿ ಬಸ್ ಗೆ ಇಂದು ಮುಂಜಾನೆ ಎರಡು ಗಂಟೆ ಸುಮಾರಿಗೆ ಬೆಂಕಿ ತಗಲಿದೆ ಎನ್ನಲಾಗಿದ್ದು ಬಸ್ ಭಾಗಶಃ ಸುಟ್ಟು ಹೋಗಿದೆ. ಅಕ್ಕಪಕ್ಕದಲ್ಲಿ ರಾಜಲಕ್ಷ್ಮಿ ಸಂಸ್ಥೆಗೆ ಸೇರಿದ ಕೆಲವು ಬಸ್ ಗಳು ಕೂಡ ಇದ್ದವು. ಅವುಗಳಿಗೆ ಹಾನಿಯಾಗಿಲ್ಲ.
ಆದರೆ ಬೆಂಕಿ ತಗುಲಲು ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು, ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಿದರೂ, ಲಾಕ್ ಡೌನ್ ನಿಂದಾಗಿ ಹಲವು ದಿನಗಳಿಂದ ಬಸ್ ಸ್ಟಾರ್ಟ್ ಮಾಡದ ಕಾರಣ ಬ್ಯಾಟರಿ ಚಾರ್ಜ್ ಇರುವುದು ಅನುಮಾನ. ಯಾರೋ ಉದ್ದೇಶ ಪೂರ್ವಕವಾಗಿ ಬಸ್ ಗೆ ಬೆಂಕಿ ಹಚ್ಚಿದ್ದಾರೆ ಅಥವಾ ಬಸ್ ನಲ್ಲಿ ರಾತ್ರಿ ಮಲಗಿ ಆಶ್ರಯ ಪಡೆದ ಅಪರಿಚಿತ ವ್ಯಕ್ತಿಗಳು ಬಳಸಿದ ಬೆಂಕಿಯ ಕಿಡಿ ಬಸ್ ಗೆ ತಾಗಿರಬಹುದು ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಅಭಿಪ್ರಾಯ ಪಟ್ಟಿದ್ದಾರೆ.