ಧರ್ಮಸ್ಥಳ: ಮೈಸೂರಿನಿಂದ ಧರ್ಮಸ್ಥಳಕ್ಕೆ ಮದುವೆ ನಿಮಿತ್ತ ಹೋಗುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಿಡ್ಲೆ ಗ್ರಾಮದ ಬೂಡುಜಾಲು ಶಾಂತಿನಗರ ಸಮೀಪ ನಡೆದಿದೆ. ಅಪಘಾತದ ಪರಿಣಾಮ 3 ಮಕ್ಕಳ ಸಹಿತ ಓರ್ವನ ಸ್ಥಿತಿ ಗಂಭೀರವಾಗಿದ್ದು, 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಮೈಸೂರಿನ ವಿಜಯನಗರದ ಕುಟುಂಬವೊಂದು ಧರ್ಮಸ್ಥಳದ ಕಲ್ಯಾಣ ಮಂಟಪವೊಂದರಲ್ಲಿ ನಿಗದಿಪಡಿಸಿದ್ದ ಮದುವೆ ಪ್ರಯುಕ್ತ ವರನ ಕುಟುಂಬಿಕರನ್ನು ಬಸ್ನಲ್ಲಿ ಕರೆ ತರಲಾಗುತ್ತಿತ್ತು. ಬಸ್ಸಿನಲ್ಲಿ 30 ಮಂದಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಸ್ಪಂದಿಸಿ ರಕ್ಷಣಾ ಕಾರ್ಯ ನಡೆಸಿದರು. ಬಸ್ಸಿನಲ್ಲಿ ಸಿಲುಕಿದವರನ್ನು ಕೂಡಲೇ ಹೊರ ತಂದು ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ವಿವರ ಹಾಗೂ ಅವರ ಆರೋಗ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಮದುಮಗ ಅಭಿಷೇಕ್ ಕೂಡ ಬಸ್ಸಿನಲ್ಲಿದ್ದು, ಯಾವುದೇ ಅಪಾಯವಾಗಿಲ್ಲ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರ ಠಾಣೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿದ್ದಾರೆ.