ಬೆಳ್ತಂಗಡಿ; ಶಿಬಾಜೆ ಗ್ರಾಮದ ಆರಂಪಾದೆ ಎಂಬಲ್ಲಿ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ಅಂಗಡಿಯಿರುವ ಕಟ್ಟಡ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ಕನೇ ಆರೋಪಿ ಟ್ಯಾಪಿಂಗ್ ಕೆಲಸ ಮಾಡುವ ಶಿಬಾಜೆ ಗ್ರಾಮದ ಅರಂಪಾದೆ ನಿವಾಸಿ ಕುರಿಯಾಕೋಸ್(48) ಎಂಬಾತನನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಏನಿದು ಪ್ರಕರಣ?
ಬೆಳ್ತಂಗಡಿ ನಿವಾಸಿ ಲತಾ (48) ಎಂಬವರ ಗಂಡ ಕೆ.ಆರ್ ವಾಸು ರವರು ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಆರಂಪಾದೆ ಎಂಬಲ್ಲಿ ಸುಮಾರು 25 ವರ್ಷಗಳ ಹಿಂದೆ ಸಿಮೆಂಟ್ ಶೀಟ್ ಛಾವಣಿಯ ಕಟ್ಟಡ ನಿರ್ಮಿಸಿ, ಅದರಲ್ಲಿ ಪರವಾನಿಗೆ ಪಡೆದು ಜಿನಸು ಅಂಗಡಿ ವ್ಯಾಪಾರ ಮಾಡಿಕೊಂಡಿದ್ದಾರೆ. ಈ ಜಾಗಕ್ಕೆ ಸಂಬಂಧಪಟ್ಟಂತೆ ತಕರಾರಿದ್ದು ದಿನಾಂಕ: 14.12.2023 ರಂದು ಆರೋಪಿಗಳಾದ ಟಿ ಕೆ ಮ್ಯಾಥ್ಯೂ ಮತ್ತು ಪ್ರಮೋದ್ ರವರುಗಳು ಸದ್ಯ ಅಂಗಡಿ ಕಟ್ಟಡ ಇರುವ ಜಮೀನಿನ ಸುತ್ತ ಬೇಲಿ ನಿರ್ಮಾಣ ಮಾಡಿದ್ದರು. ಅದನ್ನು ಲತಾ ಹಾಗೂ ಅವರ ಪತಿ ವಾಸು ಅವರು ತೆರವುಗೊಳಿಸಿದ್ದರು. ದಿನಾಂಕ: 19.12.2023 ರಂದು ರಾತ್ರಿ ಆರೋಪಿಗಳಾದ ಟಿ ಕೆ ಮ್ಯಾಥ್ಯೂ, ಪ್ರಮೋದ್, ಸನೋಧ್ ಕುಮಾರ್, ಕುರಿಯಾಕೋಸ್, ಜಯರಾಜ, ಎನ್ ಎಮ್ ಕುರಿಯಾಕೋಸ್, ರೋಬಿನ್ಸ್, ಸಂತೋಷ್ ಯು ಜಿ ಮತ್ತು ಇತರ 15 ಜನರು ಮಾರಕಾಯುಧಗಳನ್ನು ಹಿಡಿದುಕೊಂಡು ಅಂಗಡಿ ಕಟ್ಟಡ ಇರುವ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕಟ್ಟಡವನ್ನು ದ್ವಂಸ ಮಾಡಲು ಪ್ರಾರಂಭಿಸಿದ್ದು, ಈ ವೇಳೆ ಲತಾ ಹಾಗೂ ಅವರ ಪತಿ ಆಕ್ಷೇಪಿಸಿದಾಗ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಲ್ಲದೇ ವಾಸು ಅವರ ಮಾಲೀತ್ವದ ಅಂಗಡಿಯನ್ನು ಧ್ವಂಸ ಮಾಡಿ ಸುಮಾರು 50,000/- ನಷ್ಟವನ್ನುಂಟು ಮಾಡಿದ್ದಾರೆ ಎಂದು ಲತಾ ಅವರು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 110/2023 ಕಲಂ: 143, 147, 148, 447, 427, 341, 323,504,506(2) 395 ಜೊತೆಗೆ 149 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಇದೀಗ ಬಂಧಿಸಲಾಗಿದೆ.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ಸಬ್ ಇನ್ಸ್ಪೆಕ್ಟರ್ ಸಮರ್ಥ್ ಗಾಣಿಗೇರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.