ಕೊಪ್ಪಳ: ಇತ್ತೀಚೆಗೆ ಕೊಪ್ಪಳದ ಕಾರಟಗಿಯಲ್ಲಿ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಕೊಲೆಯಾದ ಮಹಿಳೆಯ ಸಹೋದರೇ ಆಕೆಯ ಕೊಲೆಗೈದಿರೋದು ಅನ್ನೋದು ತನಿಖೆಯಿಂದ ಬಯಲಾಗಿದೆ.
ಯೆಸ್…ಅಕ್ಕ ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ತಮ್ಮನೇ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಅಕ್ಕ ತ್ರಿವೇಣಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ತ್ರಿವೇಣಿ ಪತಿ ವಿನೋದ್ ಗೆ ಬಳ್ಳಾರಿಯ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ತ್ರಿವೇಣಿ ತಮ್ಮ ಅವಿನಾಶ್ ಸೋದರಿಯನ್ನ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಮುಧೋಳ ತಾಲೂಕಿನ ನಿವಾಸಿಗಳಾಗಿದ್ದ ವಿನೋದ್ (30) ಮತ್ತು ತ್ರಿವೇಣಿ (35) ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಐದು ವರ್ಷ ಸೀನಿಯರ್ ಆಗಿದ್ದ ತ್ರಿವೇಣಿ ತಮ್ಮ ಜೂನಿಯರ್ ವಿನೋದ್ ಅವರನ್ನ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ವಯಸ್ಸು ಅಡ್ಡಿಯಾಗಿರಲಿಲ್ಲ. ಆದ್ರೆ ಮದುವೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಇದರಿಂದ ಆರು ತಿಂಗಳ ಹಿಂದೆ ವಿನೋದ್ ಮತ್ತು ತ್ರಿವೇಣಿ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು.
ಮದುವೆ ಬಳಿಕ ತ್ರಿವೇಣಿ ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಗ್ರಾಮದಲ್ಲಿ ತ್ರಿವೇಣಿ ಮದುವೆ ಫೋಟೋ ನೋಡಿದ್ದ ಜನರು ಮಾತನಾಡಕೊಳ್ಳಲಾರಂಭಿಸಿದ್ದರು. ಇದರಿಂದ ಅವಮಾನಿತನಾದ ಅವಿನಾಶ್, ಅಕ್ಕ ಮತ್ತು ಬಾವನ ಕೊಲೆಗೆ ನಿರ್ಧರಿಸಿ, ಎರಡು ದಿನಗಳ ಹಿಂದೆ ಸ್ನೇಹಿತರ ಜೊತೆ ಕಾರಟಗಿ ಬಂದಿದ್ದನು. ಎರಡು ದಿನ ಅಕ್ಕನ ಚಲನವಲನ ಗಮನಿಸಿ ಶನಿವಾರ ದಾಳಿ ನಡೆಸಿ ಕೊಲೆಗೈದಿದ್ದಾನೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.