ಬಂಟ್ವಾಳ : ತನ್ನ ಸ್ವಂತ ತಮ್ಮನನ್ನು ಕೊಲೆ ಮಾಡಿರುವ ಘಟನೆ ಪಾಣೆಮಂಗಳೂರು ಗ್ರಾಮದ ಬೊಂಡಾಲ ಶಾಂತಿಗುಡ್ಡೆ ಎಂಬಲ್ಲಿ ನಡೆದಿದೆ. ಸುಂದರ (30) ಕೊಲೆಯಾದವರು. ಅವರನ್ನು ನಿನ್ನೆ ಮಧ್ಯರಾತ್ರಿ ಅವರ ಅಣ್ಣ ರವಿ ಎಂಬಾತ ಹತ್ಯೆ ಮಾಡಿದ್ದಾನೆ. ಕೊಲೆಗೈದು ಆರೋಪಿ ತಪ್ಪಿಸಿಕೊಂಡಿದ್ದಾನೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವೈಯಕ್ತಿಕ ಕಾರಣಗಳಿಂದ ಕೊಲೆ ನಡೆದಿರುವುದಾಗಿ ಸಂಶಯಿಸಲಾಗಿದೆ.
ಅವಿವಾಹಿತನಾಗಿದ್ದ ಸುಂದರ ಅವರು ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದರು. ಅಣ್ಣ ರವಿ ಮತ್ತು ಸುಂದರ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ನಿನ್ನೆ ಮನೆಯಲ್ಲಿ ತಾಯಿಯ ವರ್ಷಾಂತಿಕವಿತ್ತು. ರಾತ್ರಿ ಊಟ ಮಾಡಿ ಮನೆಯಲ್ಲಿರುವ ವೇಳೆ ಅಣ್ಣ ರವಿ ಮತ್ತು ತಮ್ಮ ಸುಂದರ ಎಂದಿನಂತೆಯೇ ಜಗಳ ಮಾಡಿಕೊಂಡಿದ್ದು, ರಾತ್ರಿ 11.30 ಗಂಟೆಯ ಸಮಯಕ್ಕೆ ಹತ್ಯೆ ನಡೆದಿದೆ.
ರವಿಯು ಸುಂದರನಿಗೆ ಅಡಿಕೆ ಸಲಾಕೆಯಿಂದ ಹೊಡೆದಿದ್ದಾನೆ. ಸುಂದರ ಅವರ ತಲೆಗೆ ಏಟು ಬಿದ್ದಿದೆ. ತಮ್ಮ ಮೃತಪಟ್ಟದ್ದನ್ನು ನೋಡಿ ಸಲಾಕೆಯನ್ನು ಬಿಸಾಡಿ ರವಿ ಓಡಿ ಹೋಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದ್ದು, ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.