ಬೆಂಗಳೂರು : ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಬಳಿಕ ಇಂದು ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಇಂದು ಸಂಜೆಯೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನೂತನ ಸಾರಥಿಗಳಾಗಿ 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸೋ ಮೂಲಕ ಇತ್ತೀಚೆಗೆ ಸೇರ್ಪಡೆಗೊಂಡಿದ್ದರು. ಈ ಸಚಿವರಿಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ. ಈ ಬಳಿಕ, ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ.
ಖಾತೆ ಹಂಚಿಕೆ ಯಥಾಪ್ರಕಾರ ಮುಖ್ಯಮಂತ್ರಿಗಳಿಗೆ ಕಗ್ಗಂಟಾಗಿದ್ದು, ಭರ್ಜರಿ ಖಾತೆ ಪಡೆಯಲು, ಇದೀಗ ಸಚಿವರ ಮಧ್ಯೆ ಪೈಪೋಟಿ ನಡೆದಿದೆ. ಬಲ್ಲ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವು ವೈಯಕ್ತಿಕವಾಗಿ ಆಸಕ್ತಿ ಹೊಂದಿರುವಂತ ಜಲಸಂಪನ್ಮೂಲ ಖಾತೆ ಸೇರದಂತೆ ಹಣಕಾಸು, ಆಡಳಿತ ಸೇವಾ ಸಿಬ್ಬಂದಿ, ಗುಪ್ತಚರ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಬಯಸಿದ್ದಾರೆ.
ಕಂದಾಯ ಖಾತೆಯ ಬಗ್ಗೆ ಸಚಿವರ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ಕಳೆದ ಸರ್ಕಾರದಲ್ಲಿ ವಸತಿ ಮಂತ್ರಿಯಾಗಿದ್ದಂತ ವಿ.ಸೋಮಣ್ಣನವರು ಕಂದಾಯ ಖಾತೆ ಬಯಸಿದ್ದು, ಇಲ್ಲದಿದ್ದರೇ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಸಿಎಂ ಮೇಲೆ ಪ್ರಭಾವ ಭೀರಿದ್ದಾರೆ. ಆದ್ರೇ ಪ್ರಭಾವಿ ಸಚಿವ ಆರ್.ಅಶೋಕ್ ಅದೇ ಖಾತೆಯ ಮೇಲೆ ಕಣ್ಣಿಟ್ಟಿದ್ದು, ಅದಕ್ಕೆ ಮುಖ್ಯಮಂತ್ರಿಗಳು ಒಲವು ವ್ಯಕ್ತಪಡಿಸಿದ್ದಾರೆ ಎಂಬುದು ಗೊತ್ತಾಗಿದೆ.
ಮತ್ತೊಂದು ಮೂಲದ ಪ್ರಕಾರ, ಆರ್.ಅಶೋಕ್ ಅವರಿಗೆ ಗೃಹ ಇಲಾಖೆ ತೆಗೆದುಕೊಳ್ಳುವಂತೆ ವಿನಂತಿಸಲಾಗಿದೆ. ಇನ್ನೂ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಜಲಸಂಪನ್ಮೂಲ ಇಲ್ಲವೇ ಇಂಧನ ಖಾತೆಗೆ ಕೋರಿಕೆ ಸಲ್ಲಿಸಿದ್ದಾರೆ ಎಂಬುದಾಗಿ ಗೊತ್ತಾಗಿದೆ. ಇಂಧನ ಖಾತೆಯನ್ನು ಸಿಎಂ ಅವರೇ ಇಟ್ಟುಕೊಳ್ಳುತ್ತಾರೋ ಅಥವಾ ಹಿರಿಯ ಸಚಿವರ ಪಾಲಾಗಲಿದೆಯೋ ಗೊತ್ತಿಲ್ಲ. ಆದ್ರೇ.. ಮುಖ್ಯಮಂತ್ರಿ ರೇಸ್ ನಲ್ಲಿದ್ದಂತ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ವಲಯದಲ್ಲಿ ಪ್ರಭಾವಿಯಾಗಿರುವಂತ ಮುರುಗೇಶ್ ನಿರಾಣಿ ಇಂಧನ ಖಾತೆಗಾಗಿ ವರಿಷ್ಠರ ಮೂಲಕ ಒತ್ತಡ ತರುವಂತ ಯತ್ನಕ್ಕೆ ಕೈಹಾಕಿದ್ದಾರೆ.
ಇನ್ನುಳಿದಂತೆ ಸುಧಾಕರ್ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡು ಖಾತೆಗಳನ್ನು ತನ್ನ ಬಳಿ ಇಟ್ಟುಕೊಳ್ಳಲು ಹರಸಾಹಸ ನಡೆಸುತ್ತಿದ್ದು, ಎರಡರಲ್ಲಿ ಒಂದನ್ನು ಮಾತ್ರ ನೀಡಲು ಸಿಎಂ ಇಂಗಿತ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಕಳೆದ ಸರ್ಕಾರದಲ್ಲಿ ಅಬಕಾರಿ ಮಂತ್ರಿಯಾಗಿದ್ದಂತ ಕೆ.ಗೋಪಾಲಯ್ಯ ಈ ಬಾರಿ ಆಹಾರ ಮತ್ತು ನಾಗರೀಕ ಖಾತೆಗೆ ಸಚಿವ ಬಿ.ಸಿ.ಪಾಟೀಲ್ ಕೃಷಿ, ಗೋವಿಂದ ಕಾರಜೋಳ ಲೋಕೋಪಯೋಗಿ ಇಲಾಖೆಗಳಲ್ಲೇ ತಮ್ಮನ್ನು ಮುಂದುವರೆಸುವಂತೆ ವಿನಂತಿಸಿದ್ದಾರೆ. ಆದರೇ ಸಿಎಂ ಮಾತ್ರ ಸಂಪುಟ ರಚನೆಯ ಮಾದರಿಯಲ್ಲೇ, ಯಥಾಸ್ಥಿತಿ ವಾದಕ್ಕೆ ಮೊರೆ ಹೋಗಿದ್ದು, ಬಹುತೇಕ ಸಚಿವರು ಅದೇ ಖಾತೆಗಳಲ್ಲಿ ಮುಂದುವರೆಯೋ ಸಾಧ್ಯತೆ ಇದೆ. ಹೊಸಬರಿಗೆ ಮಾತ್ರ, ಸಂಪುಟದಿಂದ ಹೊರ ಹೋದವರು ಹೊಂದಿದ್ದಂತ ಖಾತೆಗಳನ್ನು ಹಂಚಿಕೆ ಮಾಡಲು ಚಿಂತನೆ ನಡೆಸಿದ್ದಾರೆ. ವರಿಷ್ಠರಿಂದ ಬರುವ ಸಲಹೆ-ಸೂಚನೆಗೆ ಕಾಯುತ್ತಿದ್ದಾರೆ.