ಸುಳ್ಯ: ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳಿಗೆ ಓಡಾಟಕ್ಕೆ ಆಧಾರವಾಗಿದ್ದ ಸೇತುವೆಯೊಂದು ಭಾರೀ ಮಳೆಗೆ ನೀರು ಪಾಲಾಗಿದ್ದು, ಇದೀಗ ಗ್ರಾಮ ದ್ವೀಪದಂತಾಗಿದೆ.
ಈ ಪುಟ್ಟ ಗ್ರಾಮವನ್ನು ಸಂಪರ್ಕಿಸಲು ಮರದ ಸೇತುವೆಯೇ ಆಧಾರವಾಗಿತ್ತು. 49ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು ಒಬ್ಬ ಅಂಗವಿಕಲರೂ ಇದ್ದಾರೆ. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ ಮರದ ಪಾಲ ನಿರ್ಮಿಸಿಕೊಂಡು ಹೊಳೆ ದಾಟುತ್ತಾರೆ.
ತುಂಬಿ ಹರಿಯುವ ಹೊಳೆಗೆ ನಿರ್ಮಿಸಿದ ಕಚ್ಚಾ ಪಾಲದಲ್ಲಿ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಲ ದಾಟಬೇಕು. ಆದರೀಗ, ಭಾರೀ ಮಳೆಗೆ ಕಾಲು ಸೇತುವೆ ನೀರಿನಲ್ಲಿ ಭಾಗಶಃ ಕೊಚ್ಚಿ ಹೋಗಿದೆ. ಇಲ್ಲಿ ನೆಲೆಸಿರುವ 11 ಮನೆಗಳಿಗೆ ಈಗ ದಾರಿಯಿಲ್ಲದಾಗಿದೆ.
ಇನ್ನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಇದೀಗ ಇದ್ದೊಂದು ಕಾಲು ಸೇತುವೆ ನೀರು ಪಾಲಾಗಿದ್ದು ಜನ ದಿಕ್ಕು ತೋಚದಂತಾಗಿದ್ದಾರೆ.