ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಅಂಬುಜಾ ಹಾಗೂ ಶೃಂಗೇರಿಯ ನೆಮ್ಮಾರು ಪಂಚಾಯಿತಿಯ ಗ್ರಾಮ ಲೆಕ್ಕಿಗ ಸಿದ್ದಪ್ಪ ಇಬ್ಬರನ್ನೂ ಹಕ್ಕುಪತ್ರ ಹಗರಣ ಸಂಬಂಧ ಎಸಿಬಿ ಬಂಧಿಸಿದೆ.
ಶೃಂಗೇರಿಯ ಕಾವಡಿ ವಾಸಿ ಸಂಜಯ್ ಕುಮಾರ್ ಎಂಬುವವರ ದೂರಿನ ಅನ್ವಯ ಎಸಿಬಿ ದಾಳಿ ನಡೆಸಿದ್ದು, ಹಣ ಪಡೆಯುವಾಗ ಗ್ರಾಮ ಲೆಕ್ಕಿಗ ಸಿದ್ದಪ್ಪ ಶೃಂಗೇರಿಯ ನಿರೀಕ್ಷಣಾ ಮಂದಿರದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ನಂತರ ತಹಶೀಲ್ದಾರ್ ಅಂಬುಜಾರನ್ನು ತನಿಖೆಗೆ ಒಳಪಡಿಸಲಾಗಿತ್ತು, ತನಿಖೆಯ ಆಧಾರದ ಮೇಲೆ ಈಗ ಇಬ್ಬರನ್ನೂ ಬಂಧಿಸಲಾಗಿದೆ.
ಕಳೆದ ಎರಡು ತಿಂಗಳಿನಿಂದ ಹಕ್ಕು ಪತ್ರ ಹಗರಣ ಸಾಕಷ್ಟು ಸುದ್ದಿಯಲ್ಲಿತ್ತು.
ದಿನಾಂಕ 04.01.2022ರಂದು ಸಂಜಯ್ ಅವರು ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಅವರನ್ನು ಭೇಟಿಯಾಗಿ ಮನೆಯ ಹಕ್ಕುಪತ್ರ ಮಾಡಿಕೊಡುವಂತೆ ಕೇಳುತ್ತಾರೆ, ತಹಶೀಲ್ದಾರ್ ರು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಅವರಿಂದ ದಾಖಲೆಗಳನ್ನು ತಯಾರಿಸಿಕೊಂಡು ಬರಲು ಹೇಳುತ್ತಾರೆ. ಆದರೆ ಸಿದ್ದಪ್ಪ ಹಕ್ಕುಪತ್ರ ನೀಡಲು ಮುಂಗಡ 30 ಸಾವಿರ ಹಾಗೂ ನಂತರ 30 ಸಾವಿರ ಒಟ್ಟು 60 ಸಾವಿರ ಆಗುವುದಾಗಿ ತಿಳಿಸಿದ್ದಾರೆ. ಸಂಜಯ್ ಅವರಿಗೆ ಹಣ ನೀಡಿ ಹಕ್ಕುಪತ್ರ ಮಾಡಿಕೊಳ್ಳಲು ಇಷ್ಟವಿಲ್ಲದ ಕಾರಣ ಈ ಕುರಿತು ಎಸಿಬಿಗೆ ದೂರು ನೀಡಿದ್ದರು.
ನಿನ್ನೆ(ಗುರುವಾರ) ಬೆಳಿಗ್ಗೆ ಶೃಂಗೇರಿಯ ನಿರೀಕ್ಷಣಾ ಮಂದಿರದಲ್ಲಿ 25 ಸಾವಿರ ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪನನ್ನು ಬಂಧಿಸಲಾಗಿದೆ. ಕೆಲವು ಸಾಕ್ಷ್ಯಾಧಾರಗಳ ಆಧಾರದ ಮೇಲೆ ತಹಶೀಲ್ದಾರ್ ರನ್ನು ತನಿಖೆಗೆ ಒಳಪಡಿಸಿ ಆ ನಂತರ ಅವರನ್ನೂ ಬಂಧಿಸಲಾಗಿದೆ.