ನವದೆಹಲಿ: ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರು, ತುರ್ತು ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ .
ನವದೆಹಲಿ ಇಂದ್ರಪ್ರಸ್ಥದ ಅಪೊಲೋ ಆಸ್ಪತ್ರೆಯಲ್ಲಿ ಜಗ್ಗಿ ವಾಸುದೇವ್ ಅವರಿಗೆ ರಕ್ತಸ್ರಾವ ತಡೆಯಲು ಮಾರ್ಚ್ 17ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎನ್ನಲಾಗಿದೆ. ಇದೀಗ ಚೇತರಿಸಿಕೊಂಡಿರುವ ಸದ್ಗುರು ವೆಂಟಿಲೇಟರ್ನಿಂದ ಹೊರಬಂದಿದ್ದಾರೆ. ಅವರ ಮೆದುಳು, ದೇಹದ ಪ್ರಮುಖ ಅಂಗಾಂಗಗಳು ಚೇತರಿಸಿಕೊಳ್ಳುತ್ತಿವೆ ಎಂದು ಅಪೊಲೋ ಆಸ್ಪತ್ರೆ ಮೂಲಗಳು ತಿಳಿಸಿವೆ.
4 ವಾರಗಳಿಂದ ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಆದರೂ ಅವರು ಮಾರ್ಚ್ 8ರ ಮಹಾಶಿವರಾತ್ರಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು.ತಲೆನೋವು ಮತ್ತಷ್ಟು ತೀವ್ರಗೊಂಡಾಗ ಮಾರ್ಚ್ 15ರಂದು ಹಿರಿಯ ನರರೋಗ ತಜ್ಞ ಡಾ. ವಿನಿತ್ ಸೂರಿ ಅವರನ್ನು ದೂರವಾಣಿ ಮೂಲಕ ಸದ್ಗರು ಸಂಪರ್ಕಿಸಿದ್ದಾರೆ. ಕೂಡಲೇ ವೈದ್ಯರು ಎಂಆರ್ಐಗೆ ಮಾಡಲು ಸೂಚಿಸಿದ್ದರು ಎಂದು ತಿಳಿದು ಬಂದಿದೆ. ಮೂರ್ನಾಲ್ಕು ವಾರಗಳಿಂದ ರಕ್ತಸ್ರಾವ ಆಗುತ್ತಿರುವುದು ಎಂಆರ್ಐನಲ್ಲಿ ಕಂಡುಬಂದಿದೆ .ಅದರಂತೆ
ಸದ್ಗುರು ಅವರಿಗೆ ಕೂಡಲೇ ಆಸ್ಪತ್ರೆಗೆ ದಾಖಲಾಗಲು ಸೂಚಿಸಲಾಗಿತ್ತು. ಆದರೆ, ಮಾರ್ಚ್ 15 ಮತ್ತು 16ರಂದು ಪ್ರಮುಖ ಸಭೆಗಳು ಇದ್ದ ಕಾರಣ, ನೋವು ನಿವಾರಕ ಮಾತ್ರೆ ಪಡೆದು ಎರಡು ದಿನಗಳ ನಂತರ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆಸ್ಪತ್ರೆ ತಿಳಿಸಿದೆ.
ಮಾರ್ಚ್ 17ರಂದು ಅವರಿಗೆ ಅರೆಪ್ರಜ್ಞಾವಸ್ಥೆಗೆ ಜಾರುವುದು, ಎಡಗಾಲಿನಲ್ಲಿ ನಿಶ್ಯಕ್ತಿ ಕಾಣಿಸಿಕೊಂಡಿದೆ. ಸಿಟಿ ಸ್ಕ್ಯಾನ್ನಲ್ಲಿ ಮಿದುಳಿನ ಊತ ಹೆಚ್ಚಾಗಿರುವುದು ಕಂಡುಬಂದಿತು. ಕೂಡಲೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು ಇದೀಗ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.