ಮಂಗಳೂರು: ವ್ಯಕ್ತಿಯೊಬ್ಬರು ಮಗನನ್ನು ಕ್ಲಿನಿಕ್ಕೊಂದಕ್ಕೆ ಕರೆದುಕೊಂಡು ಹೋಗಿ ವಾಪಾಸು ಬರುತ್ತಿದ್ದಾಗ ಅವರ ಕೈಯಲ್ಲಿದ್ದ ಬ್ರೇಸ್ ಲೈಟ್ ನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾದ ಘಟನೆ ಮಂಗಳೂರಿನ ಜಿಎಚ್ಎಸ್ ರಸ್ತೆಯಲ್ಲಿ ನಡೆದಿದೆ.
ಸತೀಶ್ ರಾವ್ ಎಂಬವರು ತನ್ನ ಮಗ ರಿಷಬ್ ಸೂರ್ಯನ್ನು ಚಿಕಿತ್ಸೆಗಾಗಿ ಜಿಎಚ್ಎಸ್ ರಸ್ತೆಯಲ್ಲಿರುವ ಕ್ಲಿನಿಕ್ಗೆ ರಾತ್ರಿ 7:30ಕ್ಕೆ ಕರೆದುಕೊಂಡು ಹೋಗಿ ಮರಳುವಾಗ ಒಬ್ಬ ವ್ಯಕ್ತಿ ಅವರ ಕೈಯನ್ನು ಬಲವಾಗಿ ಹಿಡಿದಿದ್ದು, ಇನ್ನೊಬ್ಬ ವ್ಯಕ್ತಿ ತನ್ನ ಬಲಗೈಯಲ್ಲಿದ್ದ ಸುಮಾರು 22.50 ಗ್ರಾಂ ತೂಕದ ಚಿನ್ನದ ಬ್ರೇಸ್ಲೈಟನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುವುದಾಗಿ ಸತೀಶ್ ರಾವ್ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಇದರ ಬೆಲೆ ಸುಮಾರು 1.35 ಲಕ್ಷ ರೂ. ಆಗಿದ್ದು, ಸುಲಿಗೆ ಮಾಡುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಘಟನೆಯಿಂದ ತನಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ವ್ಯಕ್ತಿಗಳ ಮುಖ ಚಹರೆಗಳನ್ನು ಗಮನಿಸಿದಾಗ ತನ್ನ ಪರಿಚಯದ ಗೋವಿಂದರಾಜ್ ನಾಯಕ್ ಮತ್ತವರ ಮಗ ಗಿರೀಶ್ ನಾಯ್ಕ್ ಎಂದು ತಿಳಿದು ಬಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಸತೀಶ್ ರಾವ್ ತಿಳಿಸಿದ್ದಾರೆ.