ಬೆಳ್ತಂಗಡಿ: ಇಲ್ಲಿನ ಪೆರಿಂಜೆ ಬಂಡಸಾಲೆ ಬಳಿ ಸೋಮವಾರ ಕಾರು ಮತ್ತು ಆಟೋರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಕಳಿಯ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ಇಸಾಮ್ (11) ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದಾನೆ.
ಆಟೋರಿಕ್ಷಾ ವೇಣೂರು ಕಡೆಗೆ ಬರುತ್ತಿದ್ದ ವೇಳೆ ವೇಣೂರು ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಆಟೋ ರಿಕ್ಷಾ ಪಲ್ಟಿಯಾಗಿ ಜಖಂಗೊಂಡಿತ್ತು. ರಿಕ್ಷಾ ಚಾಲಕ ಮತ್ತು ಅದರಲ್ಲಿ ಪ್ರಯಾಣಿಸಿದ್ದ ಮಹಿಳೆ ಮತ್ತು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಮ್ಮದ್ ಇಸಾಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ರಿಕ್ಷಾದಲ್ಲಿದ್ದವರು ತಮ್ಮ ಅಜ್ಜಿ ಮನೆಯಿಂದ ಗೇರುಕಟ್ಟೆಗೆ ಬರುತ್ತಿದ್ದರು. ಉಳಿದ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ.