ಕಾರವಾರ: ಮನೆಯಲ್ಲಿ ಕೂರಬೇಡ ಕೆಲಸಕ್ಕೆ ಹೋಗು ಎಂದ ತಮ್ಮನನ್ನು ಅಣ್ಣ ಕೊಲೆ ಮಾಡಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ. ತಮ್ಮ ಅರ್ಜುನ ಶಂಕರ ಮೇಸ್ತ (23)ನನ್ನು ಅಣ್ಣ ಕೃಷ್ಣ ಶಂಕರ ಮೇಸ್ತ (25) ಹತ್ಯೆಗೈದಿದ್ದಾನೆ.
;;ತಾಯಿಯ ಜೊತೆ ಇಬ್ಬರು ಸಹೋದರರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹಿರಿಯವನಾದ ಕೃಷ್ಣ ಎಲ್ಲಿಯೂ ಕೆಲಸಕ್ಕೆ ಹೋಗದೆ ಖಾಲಿ ತಿರುಗುತ್ತಿದ್ದ ಎನ್ನಲಾಗಿದೆ. ಹೀಗೆ ಎಷ್ಟು ವರ್ಷ ಅಂತ ಖಾಲಿ ತಿರುಗೋದು, ವಯಸ್ಸಿಗೆ ಬಂದ ಮೇಲೆ ಉದ್ಯೋಗ ಇದ್ರೆ ಒಳ್ಳೆಯದು. ಮನೆಯಲ್ಲಿ ಇಬ್ಬರು ದುಡಿಮೆ ಮಾಡಿದ್ರೆ ಸಂಸಾರ ಸರಿದೂಗಿಸಬಹುದು ಎಂದು ಬುದ್ಧಿವಾದ ಹೇಳಿದ್ದೆ ತಪ್ಪಾಗಿ ಹೋಗಿದೆ. ಬುದ್ಧಿ ಮಾತು ಹೇಳಿದ ತಮ್ಮನನ್ನು ಅಣ್ಣ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಉದ್ಯೋಗದ ಕಾರಣಕ್ಕಾಗಿ ಸಹೋದರರ ನಡುವೆ ಆಗಾಗ ಜಗಳವಾಗುತ್ತಿತ್ತು. ಕಿರಿಯವನಾದ ಅರ್ಜುನ್ ಅಣ್ಣನಿಗೆ ಮನೆಯಲ್ಲಿಯೇ ಕುಳಿತಿರಬೇಡ ಕೆಲಸಕ್ಕೆ ಹೋಗು ಎನ್ನುತ್ತಿದ್ದ. ನನಗೆ ಬುದ್ಧಿ ಹೇಳಲು ಬಂದರೆ ನಿನ್ನ ಸಾಯಿಸಿ ಬಿಡ್ತೀನಿ ಎಂದು ಬೆದರಿಕೆ ಹಾಕುತ್ತಿದ್ದನು ಎನ್ನುವ ಸಂಗತಿ ತನಿಖೆಯಲ್ಲಿ ತಿಳಿದು ಬಂದಿದೆ. ನಿನ್ನೆ ಬೆಳಗ್ಗೆ 9 ಗಂಟೆಗೆ ತಾಯಿ ತಾರಾ ಮೇಸ್ತ ಹೊಟೇಲ್ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಇಬ್ಬರೂ ಸೋದರರು ಮಾತ್ರ ಇದ್ದರು. ಕೆಲಸಕ್ಕೆ ಹೋಗಿದ್ದ ತಾಯಿ ಸಂಜೆ 7-30 ಗಂಟೆಗೆ ಮನೆಗೆ ವಾಪಸ್ಸಾದಾಗ ಮನೆಯ ಬೀಗ ಹಾಕಿತ್ತು. ಕೃಷ್ಣ ಮನೆಗೆ ಬೀಗ ಹಾಕಿ ಕೇರಳ ಕಡೆ ಕೆಲಸಕ್ಕೆ ಹೋಗಿದ್ದಾನೆ. ಮೊಬೈಲ್ ಕರೆ ಮಾಡಿದ ತಾಯಿಗೆ ನೀನು ಅಜ್ಜಿ ಮನೆಗೆ ಹೋಗಿ ಮಲಗು ಎಂದು ಹೇಳಿ ಕಾಲ್ ಕಟ್ ಮಾಡಿದ್ದಾನೆ.
ಇಬ್ಬರು ಮಕ್ಕಳಲ್ಲಿ ಯಾರಾದರೊಬ್ಬರು ಬರಬಹುದು ಎಂದು ರಾತ್ರಿ 9 ಗಂಟೆಯವರೆಗೂ ಕಾದರೂ ಯಾರೂ ಬರದಿದ್ದಾಗ ಪಕ್ಕದ ಮನೆಯಾತನ ಸಹಾಯ ಪಡೆದು ಮನೆಯ ಬೀಗ ಮುರಿದು ಒಳಗೆ ಕಾಲಿಟ್ಟ ತಾಯಿಗೆ ಎದೆ ಝಲ್ ಎನ್ನಿಸುವಂತ ದೃಶ್ಯ ಕಾಣಿಸಿದೆ. ಮನೆಗೆ ಆಧಾರವಾಗಿದ್ದ ಕಿರಿಯ ಮಗ ಅರ್ಜುನ್ ಬೆಡ್ ಶೀಟ್ ಅಡಿಯಲ್ಲಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ. ಇದು ತನ್ನ ಹಿರಿಯ ಮಗನದೇ ಕೃತ್ಯ ಎನ್ನುವುದನ್ನು ಅರ್ಥಮಾಡಿಕೊಂಡ ಹೆತ್ತಾಕೆ ಅತೀವ ದು:ಖದಲ್ಲಿಯೂ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.