ಬೆಳ್ತಂಗಡಿ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪೊಲೀಸ್ ಠಾಣೆಗೆ ಹೊಸ ವರ್ಷಕ್ಕೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಪತ್ರವೊಂದು ಬಂದಿತ್ತು. ಈ ಪ್ರಕರಣ ಎಲ್ಲರನ್ನು ತಲ್ಲಣಗೊಳಿಸಿತ್ತು. ಈ ಪತ್ರವನ್ನು ಬೆನ್ನತ್ತಿ ತನಿಖೆ ನಡೆಸಿದ ಪೊಲೀಸರಿಗೆ ಕಳ್ಳನೋರ್ವ ತಾನು ಬಚಾವಾಗಲು ಹುಸಿ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ. ಇನ್ನೂ ಈ ಪತ್ರವನ್ನು ಧರ್ಮಸ್ಥಳದಲ್ಲಿ ಬರೆದು ಅಲ್ಲಿಯೇ ರಸ್ತೆ ಪಕ್ಕದಲ್ಲಿರುವ ಪೋಸ್ಟ್ ಬಾಕ್ಸ್ ಮೂಲಕ ತಮಿಳುನಾಡು ಮತ್ತು ಭಟ್ಕಳ ಪೊಲೀಸ್ ಠಾಣೆಗೆ ಕಳುಹಿಸಿದ್ದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬೆದರಿಕೆ ಪತ್ರ: ಹಲವು ಉಗ್ರರು ಬಂಧನಕ್ಕೊಳಗಾದ ಕಾರಣ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಇಂದಿಗೂ ಅತೀ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಿಕೊಂಡಿದೆ. ಇದೇ ಭಟ್ಕಳವನ್ನು ಗುರಿಯಾಗಿಸಿಕೊಂಡಿದ್ದ ಅನಾಮಿಕನೋರ್ವ ಕಳೆದ ನವೆಂಬರ್ 11ರಂದು ಭಟ್ಕಳ ಠಾಣೆಗೆ ಬಾಂಬ್ ಬ್ಲಾಸ್ಟ್ ಬೆದರಿಕೆ ಪತ್ರವನ್ನು ಹಾಕಿದ್ದ. ಈ ಓಪನ್ ಕಾರ್ಡ್ ಪತ್ರದಲ್ಲಿ “ಚೆನ್ನೈ ಕಲೆದಾ- ನೆಕ್ಟ್ಸ್ ಟಾರ್ಗೆಟ್ ಡಿಸೆಂಬರ್ 25 ಆ್ಯಂಡ್ ಹ್ಯಾಪಿ ಹ್ಯೂ ಇಯರ್ 2023 ಬ್ಲಾಸ್ಟ್” ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿತ್ತು. ಈ ಪತ್ರದಲ್ಲಿ ಅರ್ಧಚಂದ್ರಾಕೃತಿ ಮೇಲೆ ನಕ್ಷತ್ರ, 786 ನಂಬರ್ ಹಾಗೂ 2 ಲೈನ್ ಅರ್ಧಂಬರ್ಧ ಉರ್ದುವಿನಲ್ಲಿ ಏನೇನೋ ಬರೆಯಲಾಗಿತ್ತು. ಅಲ್ಲದೇ, ಅಲ್ಹಾ ತುವ್ದಿ ಎಂದು ಬರೆಯಲಾಗಿತ್ತು. ಭಟ್ಕಳ ಶಹರ ಠಾಣೆಗೆ ಬಂದಿದ್ದ ಈ ಪತ್ರವನ್ನು ಸೂಕ್ಷ್ಮ ವಿಷಯ ಎಂದು ಪರಿಗಣಿಸಿದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪತ್ರ ಬರೆದಿದ್ದ ಅನಾಮಿಕನನ್ನು ಪತ್ತೆಹಚ್ಚಲು ತನಿಖೆ ಪ್ರಾರಂಭಿಸಿದ್ದರು. ಇದೇ ಮಾದರಿಯಲ್ಲಿ ತಮಿಳುನಾಡಿನ ಪುಲಿಯಂತೋಪ್ ಕಮಿಷನರೇಟ್ ವ್ಯಾಪ್ತಿಗೂ ಪತ್ರ ಕಳುಹಿಸಿದ್ದ. ಅಂತಿಮವಾಗಿ ಸುಳ್ಳು ಬಾಂಬ್ ಬೆದರಿಕೆ ಪತ್ರ ಬರೆದಿದ್ದ ಆರೋಪಿಯೋರ್ವ ಚೆನ್ನೈ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೊಸಪೇಟೆ ಮೂಲದ ಹನುಮಂತ (42) ಆರೋಪಿಯನ್ನು ಚೆನ್ನೈ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಪತ್ರ ಬರೆದ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಗೂ ಧರ್ಮಸ್ಥಳ ಪೋಸ್ಟ್ ಆಫೀಸ್ ಗೆ ತಮಿಳುನಾಡು ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಘಟನೆಯ ವಿವರ : ಅಂತರ್ರಾಜ್ಯ ಕಳ್ಳನಾಗಿರುವ ಬಂಧಿತ ಆರೋಪಿ ಹನುಮಂತ ಬೆಂಗಳೂರಿನ ವೈಟ್ ಫಿಲ್ಡ್ ನಲ್ಲಿ ಲ್ಯಾಪ್ ಟಾಪ್ ಒಂದನ್ನು ಕದ್ದಿದ್ದನು. ಅದನ್ನು ಮಾರಲು ಚೆನ್ನೈಗೆ ತೆರಳಿದಾಗ ಅಂಗಡಿ ಮಾಲೀಕನೋರ್ವ ಲ್ಯಾಪ್ ಟಾಪ್ ಪಾಸ್ ವರ್ಡ್ ಹಾಗೂ ಐಡಿ ಕಾರ್ಡ್ ಕೇಳಿದಾಗ ಭಯದಿಂದ ಲ್ಯಾಪ್ಟಾಪ್ ಹಿಡಿದುಕೊಂಡು ಹನುಮಂತ ತಪ್ಪಿಸಿಕೊಂಡು ಓಡಿದ್ದ.

ಅಲ್ಲಿಂದ ಅಂಗಡಿ ಮಾಲಕರ ನಂಬರ್ ತೆಗೆದುಕೊಂಡು ವಾಪಾಸ್ ಬೆಂಗಳೂರಿಗೆ ಬಂದಿದ್ದ ಆತ ಅಂಗಡಿ ಮಾಲೀಕನ ಮೊಬೈಲ್ಗೆ ಕರೆ ಮಾಡಿ ಪ್ರಕರಣ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಲ್ಲದೇ, ಮಕ್ಕಳನ್ನು ಕಿಡ್ನ್ಯಾಪ್ ಮಾಡೋದಾಗಿಯೂ ತಿಳಿಸಿದ್ದ. ಇದನ್ನು ಕೇಳಿದ ಅಂಗಡಿ ಮಾಲೀಕ ಚೆನ್ನೈನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ನವೆಂಬರ್ 29ರಂದು ಧರ್ಮಸ್ಥಳದ ಪೋಸ್ಟ್ ಬಾಕ್ಸ್ ನಿಂದ ಮುಖಾಂತರ ತಮಿಳುನಾಡಿನ ಪುಲಿಯಂತೋಪು ಠಾಣೆಗೆ ಹಾಗೂ ಭಟ್ಕಳ ಪೊಲೀಸರಿಗೆ ಪತ್ರ ಬರೆದಿದ್ದನು. ಇದರಲ್ಲಿ ತಾನು ಈ ಹಿಂದೆ ಗಲಾಟೆ ಮಾಡಿದ್ದ ಅಂಗಡಿಯವನ ನಂಬರ್ ಕೂಡಾ ಹಾಕಿದ್ದ. ಇನ್ನು ಈ ಖದೀಮ ಹಿಂದೆ ಸುಳ್ಯ, ಸುಬ್ರಹ್ಮಣ್ಯದಲ್ಲಿ ತಿರುಗಾಡಿದ್ದು, ಸುಳ್ಯ ಮೂಲದ ಹಾಗೂ ಸುಬ್ರಹ್ಮಣ್ಯದಲ್ಲಿ ರಿಕ್ಷಾ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ತೇಜು ಕುಮಾರ್ ಅವರ ಡಾಕ್ಯುಮೆಂಟ್ ಕದ್ದು, ಅವರ ಅಡ್ರೆಸ್ ಹಾಗೂ ಈತನ ಫೋಟೊ ಇಟ್ಟು ಸಿಮ್ ಖರೀದಿಸಿದ್ದ. ಚೆನ್ನೈನ ಅಂಗಡಿಯವನನ್ನು ತನಿಖೆ ಮಾಡಿದಾಗ ಈ ಹಿಂದೆ ಕಳ್ಳತನ ಮಾಡಿದ ಬಳಿಕ ಫೋನ್ ಮಾಡಿ ಬೆದರಿಕೆ ಹಾಕಿದ್ದ ವ್ಯಕ್ತಿಯ ಸುಳಿವು ನೀಡಿದ್ದ. ಇದನ್ನೇ ಆಧರಿಸಿ ಚೆನ್ನೈ ಪೊಲೀಸರು ಹಾಗೂ ಭಟ್ಕಳ ಪೊಲೀಸರು ತನಿಖೆ ಮಾಡುತ್ತಾ ಸುಬ್ರಹ್ಮಣ್ಯಕ್ಕೆ ತೆರಳಿದಾಗ ಈ ವಿಷಯವೂ ಬೆಳಕಿಗೆ ಬಂದಿತ್ತು. ನಂತರ ಆರೋಪಿಯ ಮೊಬೈಲ್ ಟವರ್ ಹಾಗೂ ಇತರ ಮಾಹಿತಿಗಳನ್ನು ಪಡೆದು ಚೆನ್ನೈ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸದ್ಯ ಭಟ್ಕಳ ಪೊಲೀಸರು ಬಾಡಿ ವಾರೆಂಟ್ ಮೇಲೆ ಆರೋಪಿಯನ್ನು ಚೆನ್ನೈನಿಂದ ವಶಕ್ಕೆ ಪಡೆದು ಭಟ್ಕಳಕ್ಕೆ ಕರೆ ತಂದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಆರೋಪಿ ಜೈಲು ಪಾಲು: ಆರೋಪಿ ಹನುಮಂತ ಭಟ್ಕಳ ಪೊಲೀಸ್ ಠಾಣೆಗೆ ಪತ್ರ ಬರೆಯಲು ಕಾರಣವೇನು? ಬಾಂಬ್ ಬ್ಲಾಸ್ಟ್ ಸಂಬಂಧಿಸಿಯೇ ಪತ್ರ ಬರೆದಿದ್ದಾದ್ರೂ ಯಾಕೆ?ಇತರ ಯಾವ ಕೃತ್ಯಗಳಲ್ಲಿ ಆತ ಶಾಮೀಲಾಗಿದ್ದಾನೆ ಅನ್ನೋ ಹಲವು ಪ್ರಶ್ನೆಗಳು ಪೊಲೀಸರ ಮುಂದಿದೆ. ಆದರೆ ಅಂತರ್ ರಾಜ್ಯ ಕಳ್ಳನಾಗಿರುವ ಆರೋಪಿ ಏನೋ ಮಾಡಲು ಹೋಗಿ ಇನ್ನೇನೋ ವಿಚಾರದಲ್ಲಿ ಸಿಕ್ಕಿ ಬಿದ್ದು ಜೈಲುಪಾಲಾಗಿದ್ದಾನೆ.