ಬೆಂಗಳೂರು: ‘ರಾಜಭವನದಲ್ಲಿ ಬಾಂಬ್ ಇಟ್ಟಿದ್ದೇವೆ. ಕೆಲವೇ ಕ್ಷಣದಲ್ಲಿಅದು ಸ್ಫೋಟಗೊಳ್ಳಲಿದೆ’ ಎಂದು ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ವಡ್ಡಹಳ್ಳಿಯ ನಿವಾಸಿ ಭಾಸ್ಕರ್.
ಸೋಮವಾರ ರಾತ್ರಿ 11.30ರ ಸುಮಾರಿಗೆ ಅಜ್ಞಾತ ಸ್ಥಳದಿಂದ ಆರೋಪಿಯು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ದೊಮ್ಮಲೂರಿನ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದು, ರಾಜಭವನದಲ್ಲಿ ಬಾಂಬ್ ಇಟ್ಟಿದ್ದೇವೆ. ಕೆಲವೇ ಕ್ಷಣದಲ್ಲಿ ಅದು ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದಾನೆ.
ಈ ಬೆದರಿಕೆ ಕರೆಯಿಂದ ಗಾಬರಿಯಾದ ಎನ್ಐಎ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿಯಿಡೀ ಶೋಧ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ರಾಜಭವನದ ಮೂಲೆಮೂಲೆಯನ್ನೂ ಪರಿಶೀಲಿಸಿದ್ದರು. ಆದರೆ, ಎಲ್ಲಿಯೂ ಬಾಂಬ್ ಪತ್ತೆಯಾಗಲಿಲ್ಲ. ಬಳಿಕ ಇದು ಹುಸಿ ಬೆದರಿಕೆ ಕರೆ ಎಂದು ಗೊತ್ತಾಯಿತು.
ಪೊಲೀಸರು ಬಾಂಬ್ ಬೆದರಿಕೆ ಕರೆ ಬಂದ ಮೊಬೈಲ್ ನೆಟ್ವರ್ಕ್ ಅನ್ನು ಟ್ರ್ಯಾಕ್ ಮಾಡಿದ್ದಾರೆ. ಬಾಂಬ್ ಬೆದರಿಕೆ ನಂತರದಲ್ಲಿ ಆರೋಪಿಯು ಬೆಂಗಳೂರಿನಿಂದ ನೇರವಾಗಿ ಆಂಧ್ರದ ಚಿತ್ತೂರಿನ ದೇವಸ್ಥಾನವೊಂದಕ್ಕೆ ತೆರಳಿದ್ದು, ಚಿತ್ತೂರಿನಿಂದ ತನ್ನೂರಿಗೆ ವಾಪಸ್ ಆಗುವಾಗ ಭಾಸ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಧಾನಸೌಧ ಠಾಣೆ ಪೊಲೀಸರು ಭಾಸ್ಕರ್ ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.