ಉಳ್ಳಾಲ: ಉಳ್ಳಾಲ: ಎನ್ಐಎ ದಾಳಿ ನಡೆದ ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಮಾಜಿ ಶಾಸಕ ಬಿ.ಎಂ ಇದಿನಬ್ಬ ಪುತ್ರನ ಮನೆಗೆ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ನುಗ್ಗಲು ಯತ್ನಿಸಿದ್ದು, ಪೊಲೀಸರು ತಡೆದು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ವಿಶ್ವ ಹಿಂದು ಪರಿಷತ್ ಜಿಲ್ಲಾ ಮುಖಂಡ ಶರಣ್ ಪಂಪೈಲ್ ನೇತೃತ್ವದಲ್ಲಿ ಇಂದು ಬಿ.ಎಂ. ಇದಿನಬ್ಬ ಅವರ ಪುತ್ರ ಅಬ್ದುರಹ್ಮಾನ್ ಬಾಷಾ ಅವರ ಮನೆಗೆ ಮುತ್ತಿಗೆ ಹಾಕಲಾಗಿದೆ. ಮನೆಯ ಗೇಟ್ ವರೆಗೆ ತೆರಳಿದ ಬಜರಂಗದಳದ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.
ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಇದಿನಬ್ಬ ಪುತ್ರ ಬಿ.ಎಂ ಬಾಷಾ ಮನೆಗೆ ಎನ್ಐಎ ದಾಳಿ ನಡೆಸಿ ಅವರ ಪುತ್ರನನ್ನು ಬಂಧಿಸಿದ್ದರು. ಅಲ್ಲದೆ ಈ ಹಿಂದೆಯೂ ಮನೆಯ ಒಂದು ಸದಸ್ಯೆ ಉಗ್ರ ಸಂಘಟನೆಗಳ ಜೊತೆಗೆ ನಂಟು ಹೊಂದಿ ಸಿರಿಯಾ ದೇಶಕ್ಕೆ ತೆರಳಿದ್ದು, ಜೊತೆಗೆ ಮನೆಯಲ್ಲಿ ಹಿಂದೂ ಧರ್ಮದಿಂದ ಮತಾಂತರಗೊಂಡ ಮಹಿಳೆಯೊಬ್ಬಳು ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಇರುವ ಕುರಿತು ಎನ್ಐಎ ಮಾಹಿತಿ ಕಲೆಹಾಕಿ ಆಕೆಯ ಪಾಸ್ ಪೋರ್ಟ್ ಅನ್ನು ಸೀಝ್ ಮಾಡಿದೆ. ಇದನ್ನು ಖಂಡಿಸಿ, ಉಳ್ಳಾಲದ ಮಾಜಿ ಶಾಸಕರ ಕುಟುಂಬವನ್ನು ಬಹಿಷ್ಕರಿಸಿ, ಲವ್ ಜಿಹಾದ್ ನಡೆದಿರುವುದಾಗಿ ಆರೋಪಿಸಿ ವಿ.ಹಿಂ.ಪ ಬಜರಂಗದಳ ಬೆಳಗ್ಗಿನಿಂದ ಉಳ್ಳಾಲದಾದ್ಯಂತ ಬ್ಯಾನ್ ಟೆರರಿಸಂ ಅನ್ನುವ ಪೋಸ್ಟ್ ಹಿಡಿದುಕೊಂಡು ಜನಜಾಗೃತಿ ಆಂದೋಲನ ಆರಂಭಿಸಿತ್ತು.
ತಲಪಾಡಿ, ಕೋಟೆಕಾರು, ಬೀರಿ, ತೊಕ್ಕೊಟ್ಟು, ಮುಡಿಪು, ನೇತ್ರಾವತಿ ಸೇತುವೆ, ಕಲ್ಲಾಪು, ಕೊಣಾಜೆ ಸಹಿತ ವಿವಿದೆಡೆ ಹಿಂದೂ ಕಾರ್ಯಕರ್ತರು ಜನಜಾಗೃತಿ ಆಂದೋಲನ ಹಮ್ಮಿಕೊಂಡಿದ್ದು, ಬಳಿಕ ವಿ.ಹಿಂ.ಪ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಎನ್ಐಎ ದಾಳಿ ನಡೆದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ ಬಾಷಾ ಮನೆಗೆ ನುಗ್ಗಲು ಯತ್ನಿಸಿತ್ತು. ಅಲ್ಲದೆ ಹಿಂದೂ ಧರ್ಮದಿಂದ ಮತಾಂತರಗೊಂಡಿರುವ ಮಹಿಳೆ ಮನೆಯಿಂದ ಹೊರಬರುವಂತೆ ಒತ್ತಾಯಿಸಿದ್ದಾರೆ. ಬಳಿಕ ಕಾರ್ಯಕರ್ತರನ್ನು ತಡೆದ ಪೊಲೀಸರು ಬಂಧಿಸಿದ್ದಾರೆ.