ಕಡಬ; ಬಿಜೆಪಿ ಮುಖಂಡನ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿ ಅವರ ಗೌರವಕ್ಕೆ ಧಕ್ಕೆ ತಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರ ವಿರುದ್ದ ದೂರು ದಾಖಲಾದ ಘಟನೆ ಕಡಬದಲ್ಲಿ ನಡೆದಿದೆ.
ಕಡಬ ತಾಲೂಕು ಐತೂರು ಗ್ರಾಮದ ಪ್ರವೀಣ್.ಟಿ. (36), ನಿತಿನ್ ಕುಮಾರ್ (35) ಹಾಗೂ ಬಂಟ್ರ ಗ್ರಾಮದ ಉಮೇಶ್.ಬಿ. (38) ಪ್ರಕರಣದ ಆರೋಪಿಗಳು. ಇವರ ವಿರುದ್ದ ದ.ಕ.ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ IT act 66(E),67(A) ರಂತೆ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು ಐತೂರು ನಿವಾಸಿ ಸತೀಶ್.ಕೆ. ಯಾನೆ ಸತ್ಯ ಪೂಜಾರಿಯವರು ಎಂಬವರು ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ನಾಲ್ಕು ಬಾರಿ ಸದಸ್ಯ ಹಾಗೂ ಮೂರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಎರಡು ವಾರಗಳ ಹಿಂದೆ ಸತೀಶ್.ಕೆ ಅವರನ್ನು ಹೋಲುವ ವ್ಯಕ್ತಿಯ ವಿಡಿಯೋವೊಂದು ಕಡಬ ಅಸು ಪಾಸಿನ ಪರಿಸರದ ವಾಟ್ಸಾಪ್ ಗ್ರೂಪುಗಳಲ್ಲಿ ಹರಿದಾಡಿತ್ತು. ತಾಂತ್ರಿಕ ವಿಶ್ಲೇಷಣೆಯ ವೇಳೆ ಅದು ಬೇರಾವುದೋ ಹಳೆ ವಿಡಿಯೋಗೆ ಇವರ ಫೋಟೊವನ್ನು ಎಡಿಟ್ ಮಾಡಿ ಹಾಕಲಾದ ವಿಡಿಯೋ ಅನ್ನೋದು ಗೊತ್ತಾಗಿದೆ.
ಅಲ್ಲದೇ ಮೂವರು ಆರೋಪಿಗಳು ಸತೀಶ್ ಅವರ ಮಾನ ಹಾನಿ ಮಾಡುವ ಉದ್ದೇಶದಿಂದ ವಿಡಿಯೋ ಎಡಿಟ್ ಮಾಡಿ ಸತೀಶ ಅವರ ಪರಿಚಯಸ್ಥರ ಮೊಬೈಲ್ ಗಳಿಗೆ ಕಳುಹಿಸಿದ್ದರು ಎನ್ನಲಾಗಿದೆ. ಇದು ಗಮನಕ್ಕೆ ಬರುತ್ತಲೇ ಸತೀಶ್ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.ಅದರಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.