ಸುಳ್ಯ: ಬಿಸಿಯೂಟದ ಅಕ್ಕಿಯನ್ನು ಶಾಲೆಯೊಂದರಿಂದ ಸೊಸೈಟಿಗೆ ಮಕ್ಕಳನ್ನು ಬಳಸಿಕೊಂಡು ಸಾಗಾಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜಾಲ್ಸೂರು ಗ್ರಾಮದ ಅಡ್ಕಾರ್ ವಿನೋಬನಗರ ವಿವೇಕಾನಂದ ಖಾಸಗಿ ಶಾಲೆಯಲ್ಲಿದ್ದ ಮಕ್ಕಳ ಬಿಸಿಯೊಟದ ಹಳೆಯ ಕೊಳೆತ ಅಕ್ಕಿಯನ್ನು ಸ್ಥಳೀಯ ಅಡ್ಕಾರ್ ನಲ್ಲಿನ ಸೊಸೈಟಿ ಮೂಲಕ ಹೊಸ ಅಕ್ಕಿಯೊಂದಿಗೆ ಪರಸ್ಪರ ಬದಲಾಯಿಸಿಕೊಂಡಿದ್ದು, ಈ ಮೂಲಕ ಗ್ರಾಮಸ್ಥರಿಗೆ ಹುಳುಕು ಅಕ್ಕಿಯನ್ನು ವಿತರಿಸಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶಾಲೆಯಲ್ಲಿದ್ದ ಅಕ್ಕಿ ವಾಸನೆ ಬರುತ್ತಿದೆ ಎಂಬ ದೂರು ಬಂದ ಹಿನ್ನೆಲೆ ಬೇರೆ ಅಕ್ಕಿಯೊಂದಿಗೆ ಬದಲಾವಣೆ ಮಾಡಲು ಶಾಲಾ ಮುಖ್ಯ ಶಿಕ್ಷಕರನ್ನೇ ಮುಂದೆ ನಿಲ್ಲಿಸಿ ಶಾಲಾ ಆಡಳಿತ ಈ ರೀತಿ ಕೆಲಸ ಮಾಡಿದೆ ಎಂದು ಆರೋಪಿಸಲಾಗಿದೆ.
ಶಾಲಾ ಮಕ್ಕಳನ್ನೇ ಬಳಸಿಕೊಂಡು ವಿವೇಕಾನಂದ ಶಾಲಾ ಮುಖ್ಯ ಶಿಕ್ಷಕ ಜಯ ಪ್ರಕಾಶ ಕಾರಿಂಜರು ಸರ್ಕಾರದ ಪಡಿತರ ವ್ಯವಸ್ಥೆ ಅಲ್ಲಿ ವಿತರಿಸಬೇಕಿದ್ದ ಅಕ್ಕಿಯೊಡನೆ ಸ್ಥಳೀಯ ಅಡ್ಕಾರ್ ಸೊಸೈಟಿಯಲ್ಲಿ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಈ ಕಳ್ಳ ಸಾಗಾಣಿಕೆಗೆ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಂಘ ಇದರ ಅಡ್ಕಾರ್ ಶಾಖಾ ಮ್ಯಾನೇಜರ್ ಗಂಗಾಧರ್ ಅಡ್ಕರ್ ಸಾಥ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಸ್ಥಳೀಯ ಉದ್ಯಮಿಯಾದ ಅಡ್ಕರ್ ಗೋಡಂಬಿ ಕಾರ್ಖಾನೆ ಮಾಲೀಕ ಉಪೇಂದ್ರ ಕಾಮತ್ ಅಧ್ಯಕ್ಷರಾಗಿರುವ ಈ ಶಾಲೆ ಮಕ್ಕಳಿಗೆ ಅನ್ನ ಹಾಕುವ ಬದಲು ಮಕ್ಕಳ ಹೊಟ್ಟೆಗೆ ಹುಳ ಹಾಕಿದೆ. ಈ ಬಗ್ಗೆ ಸರಿಯಾದ ತನಿಖೆ ಆಗಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.