ಸಕಲೇಶಪುರ: ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಸಂಪರ್ಕ ಕೊಂಡಿಯಾಗಿದ್ದ ಬಿಸಿಲೆ ಘಾಟ್ ಮಾರ್ಗದಲ್ಲಿ 45 ದಿನ ‘ವಾಹನ ಸಂಚಾರ’ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಬೆಂಗಳೂರು-ಜಾಲ್ಸೂರು ರಸ್ತೆಯಲ್ಲಿನ ಬಿಸಿಲೆ ಘಾಟ್ ವ್ಯಾಪ್ತಿಯಲ್ಲಿ ಬಾಕಿ ಇರುವ ಕಿ. ಮೀ. 283 ರಿಂದ 286ರ ತನಕ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕಿದೆ. ಈ ಕಾಮಗಾರಿ ಹಿನ್ನಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಏಪ್ರಿಲ್ 16 ರಿಂದ ಜೂನ್ 1ರ ತನಕ ಬಿಸಿಲೆ ಘಾಟ್ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗಲಿದೆ. ಬದಲಿ ಮಾರ್ಗವನ್ನು ಹಾಸನ ಜಿಲ್ಲಾಡಳಿತವೇ ಸೂಚಿಸಿದೆ.
ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ, ಗುಂಡ್ಯ ಮತ್ತು ಸೋಮವಾರಪೇಟೆ-ಮಡಿಕೇರಿ-ಸುಳ್ಯ ಮಾರ್ಗದಲ್ಲಿ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ, ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರು, ಸ್ಥಳೀಯ ಗ್ರಾಮಗಳಾದ ಹೆತ್ತೂರು, ಯಸಳೂರು, ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಜನರಿಗೆ ಇದರಿಂದಾಗಿ ತೊಂದರೆ ಉಂಟಾಗಲಿದೆ.