
ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಬಿ.ಸಿ.ರೋಡಿನ ಎಲ್ ಐಸಿ ಕಚೇರಿ ಮುಂಭಾಗ ಸೋಮವಾರ (ಫೆ.24ರಂದು) ನಡೆದಿದೆ. ಸರಸ್ವತಿ (50) ಮೃತ ಮಹಿಳೆ.
ಉಪ್ಪಿನಂಗಡಿ ಸಮೀಪದ ನಟ್ಟಿಬೈಲು ಎಂಬಲ್ಲಿನ ನಿವಾಸಿ ಕೆ.ಸದಾರಾಮ ಅವರ ಪತ್ನಿ ಸರಸ್ವತಿ ಅವರು ಸೋಮವಾರ ಬೆಳಗ್ಗೆ ಎಲ್ ಐಸಿ ಕಚೇರಿಯಲ್ಲಿ ಕೆಲಸ ಮುಗಿಸಿ, ಉಪ್ಪಿನಂಗಡಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ಅವರಿಗೆ ಸ್ಕೂಟರ್ ಒಂದು ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಯ ಭಾಗಕ್ಕೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ತುಂಬೆಯಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ರಾತ್ರಿ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಪತಿ ಎಲ್ ಐಸಿ ಏಜೆಂಟ್ ಆಗಿದ್ದು, ಕಚೇರಿಯಲ್ಲಿ ಕಾರ್ಯಕ್ರಮವೊಂದು ಇದ್ದ ಕಾರಣ ಇವರು ಬಂದಿದ್ದರು ಎನ್ನಲಾಗಿದೆ. ಪಾಣೆಮಂಗಳೂರಿನ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಸ್ವತಿ ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ.


