ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದರು.
ಅವರು ತಂದೆ ಬಸವರಾಜ ಬೊಮ್ಮಾಯಿ ಹಾಗೂ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಜೊತೆ ಶುಕ್ರವಾರದಂದು ಮೆರವಣಿಗೆ ನಡೆಸಿ ಉಮೇದುವಾರಿಕೆ ಸಲ್ಲಿಸಿದರು.
ಈ ಮೊದಲೇ ಗುರುವಾರದಂದು ಸಾಂಕೇತಿಕವಾಗಿ ನಾಮಪತ್ರ ಭರತ್ ಅವರು ಸಲ್ಲಿಸಿದ್ದರು.
ಶಿಗ್ಗಾವಿಯಲ್ಲಿ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಮೆರವಣಿಗೆಯ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ‘ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಕ್ಕೆ ಬಂದು ಬಿಜೆಪಿಗೆ ಮತ ಚಲಾಯಿಸಬೇಕು. ಬಸವರಾಜ ಬೊಮ್ಮಾಯಿ ಅವರ ರೀತಿಯಲ್ಲಿ ಹೆಚ್ಚಿನ ಮತಗಳ ಅಂತರದಲ್ಲಿ ಭರತ್ ಅವರನ್ನು ಗೆಲ್ಲಿಸಬೇಕು’ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ ಭರತ್ ಬೊಮ್ಮಾಯಿ ಅವರಿಗೆ ಅಭಿವೃದ್ಧಿ ಕೆಲಸ ಮುಂದುವರಿಯಲು ಹಾಗೂ ಕ್ಷೇತ್ರದ ಜನರ ರಕ್ಷಣೆಗಾಗಿ ಆಶೀರ್ವದಿಸಿ’ ಎಂದರು.
ಅಭ್ಯರ್ಥಿ ಭರತ್ ಬೊಮ್ಮಾಯಿ ಮಾತನಾಡಿ, ‘ಕ್ಷೇತ್ರದ ಅಭಿವೃದ್ದಿ ಬಗ್ಗೆ ತಂದೆ ಕನಸು ಕಂಡಿದ್ದಾರೆ. ಕನಸು ನನಸು ಮಾಡಲು ನಾನು ಕೆಲಸ ಮಾಡುತ್ತೇನೆ. ಮತದ ರೂಪದಲ್ಲಿ ಆಶೀರ್ವಾದ ಮಾಡಿ’ ಎಂದು ಹೇಳಿದರು.