ಬೆಂಗಳೂರು: ನವೆಂಬರ್ 15ರಂದು ಶಿವರಾಜ್ಕುಮಾರ್, ರುಕ್ಮಿಣಿ ವಸಂತ್ ಜೋಡಿಯಾಗಿ ನಟಿಸಿರುವ ‘ಭೈರತಿ ರಣಗಲ್’ ಚಿತ್ರ ತೆರೆಗೆ ಬರಲಿದೆ.
ನರ್ತನ್ ನಿರ್ದೇಶನದ ಈ ಚಿತ್ರ ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿದ್ದು, ‘ಭೈರತಿ ರಣಗಲ್’ನ ಸೀಕ್ವೆಲ್ ಅನ್ನು ಚಿತ್ರತಂಡ ಘೋಷಿಸಿದೆ. ಚಿತ್ರದ ‘ಅಜ್ಞಾತವಾಸ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
‘ಅಜ್ಞಾತವಾಸ’ ಗೀತೆಗೆ ವಿ.ನಾಗೇಂದ್ರಪ್ರಸಾದ್ ಸಾಹಿತ್ಯವಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್ಕುಮಾರ್ ಚಿತ್ರವನ್ನು ನಿರ್ಮಿಸಿದ್ದಾರೆ.
ನಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ನಲ್ಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಚಿತ್ರದ ಎರಡನೇ ಭಾಗ ಕೂಡ ಕಥೆಯ ಸೀಕ್ವೆಲ್ ಆಗಿ ಮೂಡಿಬರಲಿದೆ’ ಎಂದರು ಶಿವಣ್ಣ.
ನವೆಂಬರ್ 5ರಂದು ಟ್ರೇಲರ್ ಬಿಡುಗಡೆಗೊಳ್ಳಲಿದೆ. ದೇವರಾಜ್, ಅವಿನಾಶ್, ರಾಹುಲ್ ಬೋಸ್, ಛಾಯಾಸಿಂಗ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಗಣದಲ್ಲಿದ್ದಾರೆ. ನವೀನ್ ಕುಮಾರ್ ಛಾಯಾಚಿತ್ರಗ್ರಹಣವಿದೆ.