ಬೆಂಗಳೂರು: ಈ ಹಿಂದೆ ಛಾಪಾ ಕಾಗದ ಹಗರಣ ಇಡೀ ದೇಶವನ್ನು ತಲ್ಲಣಗೊಳಿಸಿದ್ದು ಈಗ ಈ ದಂಧೆ ಮತ್ತೆ ತಲೆ ಎತ್ತಿದೆ. ರಾಜ್ಯ ರಾಜಧಾನಿಯಲ್ಲಿ ನಕಲಿ ಛಾಪಾ ಕಾಗದ ದಂಧೆಕೋರರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಗಳಲ್ಲಿ ಸಲ್ಲಿಸಲು ಈ ನಕಲಿ ಛಾಪಾ ಕಾಗದಗಳನ್ನು ಬಳಸಲಾಗುತ್ತಿತ್ತು. ಇವುಗಳನ್ನು ತಯಾರಿಸುತ್ತಿದ್ದ ಗ್ಯಾಂಗಿನ ಒಬ್ಬ ಸದಸ್ಯನ ಹೆಸರು ಛೋಟಾ ತೆಲಗಿ ಎಂದಿದ್ದು,ಇವನ ಗ್ಯಾಂಗ್ನಲ್ಲಿದ್ದ ಇನ್ನೂ ಮೂವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕಂದಾಯ ಭವನ ಮತ್ತು ಸಿಟಿ ಸಿವಿಲ್ ಕೋರ್ಟ್ ಬಳಿ ಟೈಪ್ರೈಟಿಂಗ್ ಮಾಡುತ್ತಿದ್ದ ಹರೀಶ್, ಸೀಮಾ ಅಲಿಯಾಸ್ ಷವರ್, ನಜಮಾ ಫಾತಿಮಾ ಬಂಧಿತರು.
ಕರಾರು ಪತ್ರ, ಜಿಪಿಎ, ವಿಲ್ ಮತ್ತಿತರ ಕಾಗದಗಳನ್ನು ಮಾಡಿಸಿಕೊಳ್ಳಲು ನಗರದ ನ್ಯಾಯಾಲಯಗಳಿಗೆ ಮತ್ತು ಕಂದಾಯ ಭವನಕ್ಕೆ ಬರುತ್ತಿದ್ದ ಗ್ರಾಹಕರನ್ನು ಸೆಳೆಯುತ್ತಿದ್ದ ಈತನ ಗ್ಯಾಂಗ್, ಅವರಿಗೆ ಗೊತ್ತಾಗದಂತೆ ನಕಲಿ ಛಾಪಾ ಕಾಗದಗಳನ್ನು ಚಲಾವಣೆ ಮಾಡುತ್ತಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಮೋಸ ಆಗುತ್ತಿತ್ತು. ಇವರಿಂದ 400ಕ್ಕೂ ಹೆಚ್ಚು ನಕಲಿ ಛಾಪಾ ಕಾಗದಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.