ಬೆಳ್ತಂಗಡಿ: ಧರ್ಮಸ್ಥಳ ಸಮೀಪ ಕುದ್ರಾಯದಲ್ಲಿ ಹರಿಯುವ ಅಣಿಯೂರು ಹೊಳೆಯಲ್ಲಿ ಸ್ನಾನಕ್ಕೆ ಇಳಿದ ಬಾಲಕಿಯೊಬ್ಬಳು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.
ಮೃತ ಬಾಲಕಿ ಬೆಂಗಳೂರು ನಿವಾಸಿ ದೇವಯ್ಯ ಎಂಬವರ ಪುತ್ರಿ ಮಾನಸ ಡಿ ಹಿರೇಮಠ (15) ಎಂದು ಗುರುತಿಸಲಾಗಿದೆ.
ಕುಟುಂಬದವರೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದ ದೇವಯ್ಯರ ಕುಟುಂಬ ಮೊದಲೇ ನಿರ್ಧರಿಸಿದಂತೆ ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯಬೇಕಿತ್ತು. ಆದರೆ ಭಾನುವಾರ ಆದ ಕಾರಣ ನೇತ್ರಾವತಿ ಸ್ನಾನ ಘಟ್ಟದಲ್ಲಿ ರಶ್ ಇರುತ್ತದೆಂದು ಯಾರೋ ನೀಡಿದ ಸಲಹೆ ಮೇರೆಗೆ ಕೊಕ್ಕಡ-ಧರ್ಮಸ್ಥಳ ದಾರಿ ಮದ್ಯೆ ಸಿಗುವ ಕುದ್ರಾಯದ ಅಣಿಯೂರು ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದರು.
ಈ ಸಂದರ್ಭ ಬಾಲಕಿ ನೀರಿನಲ್ಲಿ ಮುಳುಗಿದ್ದಾಳೆ, ಕೂಡಲೇ ಆಕೆಯನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.