ಹಾಸನ: ಸರ್ವಧರ್ಮ ಸಮನ್ವಯ ಸಾರೋ ಹಾಗೂ ಹಲವು ವಿಶೇಷತೆಗಳನ್ನೊಳಗೊಂಡಿರೋ ಐತಿಹಾಸಿಕ ಬೇಲೂರಿನ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು. ಇಂದಿನ ಉತ್ಸವದಲ್ಲಿ ಸಾವಿರಾರು ಭಕ್ತರು ನೆರೆದು, ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ರು. ಚನ್ನಕೇಶವ ರಥೋತ್ಸವದ ಮತ್ತೊಂದು ವಿಶೇಷತೆ ಅಂದ್ರೆ ರಥೋತ್ಸವ ಆರಂಭಕ್ಕೂ ಮುನ್ನ ಮುಸ್ಲಿಂ ಸಮುದಾಯವರು ಖುರಾನ್ ಪಠಣ ಮಾಡೋದು.. ಹಿಂದೂಯೇತರರಿಗೆ ಅವಕಾಶ ನೀಡಬಾರದೆಂಬ ಕೂಗಿನ ಆತಂಕದ ನಡುವೆಯೂ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು…
ಪ್ರತಿವರ್ಷ ಬ್ರಹ್ಮರಥೋತ್ಸವ ಚಾಲನೆಗೂ ಮುನ್ನ ಮುಸ್ಲಿಂರ ಪವಿತ್ರ ಗ್ರಂಥ ಖುರಾನ್ ಪಠಣ ಮಾಡಲಾಗುತ್ತದೆ. ದೊಡ್ಡ ಮೇದೂರಿನ ಖಾದ್ರಿ ವಂಶಸ್ಥರು ಖುರಾನ್ ಪಠಿಸಿದ ನಂತರವೇ ರಥವನ್ನ ಎಳೆಯಲಾಗುತ್ತದೆ. ಸರ್ವಧರ್ಮೀಯರು ಸಹಬಾಳ್ವೆಯಿಂದ ಬಾಳಬೇಕು ಎಂಬ ಸಂದೇಶ ಸಾರಲು ಹೊಯ್ಸಳ ಅರಸರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದೆ ವೇಳೆ ಅಲಂಕೃತ ರಥದ ಮೇಲೆ ಶುಭ ಸೂಚಕವಾದ ಹದ್ದು ಹಾರಲಿದೆ. ಈ ಸಂದರ್ಭ ಕಣ್ತುಂಬಿಕೊಂಡಂತೆ ಬೇಡಿದ್ದು ಈಡೇರಲಿದೆ ಎಂಬ ನಂಬಿಕೆ ಇರುವುದರಿಂದ ಹೆಚ್ಚಿನ ಭಕ್ತರು ನೆರೆಯುತ್ತಾರೆ. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೂಡಾ ಭಾಗಿಯಾಗಿ ಚನ್ನಕೇಶವನ ದರ್ಶನ ಪಡೆದರು.
ಜಾತ್ರೆ ಆರಂಭಕ್ಕೆ ಹದಿನೈದು ದಿನ ಬಾಕಿ ಇರುವಾಗಲೇ ವಿಶ್ವಹಿಂದೂ ಪರಿಷದ್ ಮುಖಂಡರು ಹಿಂದೂಯೇತರರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಾರದೆಂದು ಮನವಿ ಕೂಡಾ ಸಲ್ಲಿಸಿದ್ರು. ಆದ್ರೆ ತಾಲೂಕು ಆಡಳಿತ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ಪುರಸಭೆಯಿಂದ ವ್ಯಾಪಾರಕ್ಕೆ ಬಿಡ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಧರ್ಮದವರೂ ಜಾತ್ರೆಯ ವ್ಯಾಪಾರದಲ್ಲಿ ಖುಷಿಯಾಗಿ ಭಾಗಿಯಾಗಿದ್ರು. ಇನ್ನೂ ಜಾತ್ರೆ ಅರಂಭಕ್ಕೂ ಮುನ್ನ ಖುರಾನ್ ಪಠಣದ ವಿಚಾರದಲ್ಲಿಯೂ ಧಾರ್ಮಿಕ ದತ್ತಿ ಇಲಾಖೆಯ ಅನುಮತಿಯನ್ನು ಪಡೆದು ಅವಕಾಶ ಕಲ್ಪಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಲಿಂಗೇಶ್ ಮಾತನಾಡಿ, ಯಾವುದೇ ಸಣ್ಣ ಗೊಂದಲಗಳಿಲ್ಲದೇ, ಹಿಂದೂ ಮುಸ್ಲಿಂ ಎಂಬ ಭೇದವಿಲ್ಲದೇ ಎಲ್ಲರೂ ಒಂದೇ ಭಾವನೆಯಿಂದ ಜಾತ್ರೆಯಲ್ಲಿ ಭಾಗಿಯಾಗಿದ್ದಾರೆ, ಎಲ್ಲವೂ ಹಿಂದಿನ ಸಂಪ್ರದಾಯದಂತೆ ನಡೆದಿದೆ ಎಂದರು