ಬೆಳ್ತಂಗಡಿ: ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯ ವಾಸು ಸಪಲ್ಯ (66) ಕೊಲೆ ಪ್ರಕರಣದ ಆರೋಪಿ ದಯಾನಂದ ಸಪಲ್ಯ(32) ಇಂದು ಸಂಜೆ ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ನೇತೃತ್ವದಲ್ಲಿ ಕರೆತಂದು ಸ್ಥಳ ಮಹಜರು ನಡೆಸಲಾಯಿತು.
ಈ ವೇಳೆ ಸಾರ್ವಜನಿಕರು ಕೂಡ ಜಮಾಯಿಸಿದ್ದರು. ಸ್ಥಳ ಮಹಜರು ವೇಳೆ ಆರೋಪಿಯ ತಾಯಿ ಗಾಯತ್ರಿ, ಸಹೋದರರಾದ ಸುದರ್ಶನ್ ಹಾಗೂ ನಾಗರಾಜ್ ಕೂಡ ಬಂದಿದ್ದು ಈ ವೇಳೆ ತಾಯಿ ನಿನಗೆ ಗಲ್ಲು ಶಿಕ್ಷೆ ಅಗಬೇಕು. ದಯಾನಂದನ ಕೈಕಾಲು ಇಲ್ಲಿಯೇ ಮುರಿದು ಹಾಕಿ ನಾವು ಅವನನ್ನು ಮನೆಗೆ ಇನ್ನೂ ಸೇರಿಸುವುದಿಲ್ಲ ಎಂದು ಅಳುತಾ ಶಾಪಹಾಕಿದರು ಅಲ್ಲದೆ ಇಬ್ಬರು ಮಕ್ಕಳು ಕೂಡ ಗಲ್ಲು ಶಿಕ್ಷೆಯಾಗಬೇಕೆಂದು ಗೊಬ್ಬೆಹಾಕಿ ಆತನ ಮೇಲೆ ಎಗರಾಡಿದ್ದಾರೆ.
ಈ ವೇಳೆ ತಾಯಿ ಬಳಿ ತಪ್ಪಾಯಿತು ಕ್ಷಮಿಸಿ ಅಂತ ಆರೋಪಿ ದಯಾನಂದ ಅಳುತ್ತಾ ನಿಂತಿದ್ದ ಆರೋಪಿ ಮೇಲೆ ಸಾರ್ವಜನಿಕರಿಂದ ಅಥವಾ ಮನೆಮಂದಿಯಿಂದ ಹಲ್ಲೆಯಾಗುವ ದೃಷ್ಟಿಯಿಂದ ಪೊಲೀಸರು ಭದ್ರತೆವಹಿಸಿಕೊಂಡರು.
ಘಟನೆ ಬಗ್ಗೆ ಎಲ್ಲಾ ಮಾಹಿತಿ ಪೊಲೀಸರಿಗೆ ಹೇಳಿದ್ದು ಘಟನೆ ವೇಳೆ ಹಾಕಿದ್ದ ಬಟ್ಟೆಯನ್ನು ಗ್ರೌಂಡ್ ಪಕ್ಕದ ಪೊದೆಯಲ್ಲಿ ಹಾಕಿದ್ದನ್ನು ತೊರಿಸಿದ್ದು ಅದನ್ನು ಪೊಲೀಸರು ಮಹಜರು ನಡೆಸಿ ವಶಪಡಿಸಿಕೊಂಡರು.
ತಾಯಿ ಹೇಳೋದೇನು ?
ನನ್ನ ದೇವರನ್ನು ಕೊಂದ ಮೇಲೆ ಇನ್ನೇನಿದೆ? ಅಯನ ಕೈ ಕಾರ್ ಪೊಲ್ತ್ ಪಡ್ಲೆ ( ಅವನ ಕೈ ಕಾಲು ಮುರಿದು ಹಾಕಿ) ಎಂದು ಪೋಲೀಸರ ಎದುರೇ ತಮ್ಮ ಮನಸ್ಸಿನ ನೋವನ್ನು ಹೇಳಿದರು.
ಸಹೋದರ ಸುದರ್ಶನ್ ಹೇಳೋದೇನು ?
‘ಅವನಿಗೆ ಗಲ್ಲು ಶಿಕ್ಷೆ ಅಗಬೇಕು. ಅವನನ್ನು ತಾಯಿ ಹೇಳಿದ ಹಾಗೆ ಮುಂದೆಂದಿಗೂ ಮನೆಗೆ ಸೇರಿಸುವುದಿಲ್ಲ. ಮಕ್ಕಳು ತಪ್ಪು ಮಾಡಿದರೆ ತಂದೆ-ತಾಯಿ ಬೈಯುವುದು ಸಹಜ. ಅವನಿಗೆ ಈಗ 32 ವರ್ಷ. ಅವನನ್ನು ಇಲ್ಲಿಯವರೆಗೆ ನಮ್ಮ ತಂದೆ-ತಾಯಿಯೇ ಸಾಕಿದ್ದಾರೆ. ನಮ್ಮ ತಂದೆ 25 ವರ್ಷ ಬೆಳ್ತಂಗಡಿಯಿಂದ ಮಂಗಳೂರಿಗೆ ಟ್ಯಾಕ್ಸಿ ಓಡಿಸಿ ಜೀವನ ನಡೆಸಿದ್ದಾರೆ. ಕೊರೊನಾದಿಂದ 5 ತಿಂಗಳಿಂದ ಮನೆಯಲ್ಲಿದ್ದ ತಂದೆ, ಅವನಿಗೂ ಊಟ ಹಾಕಿ ಸಾಕಿದ್ದಾರೆ. ತನ್ನ ತಂದೆಯನ್ನು ಕೊಲೆ ಮಾಡಲು ಹೇಗೆ ಮನಸ್ಸು ಬಂದಿದೆ ಅಂತ ಗೊತ್ತಾಗುತ್ತಿಲ್ಲ. ದಯಾನಂದ ಮಾನಸಿಕವಾಗಿ ಹೇಗಿದ್ದ ಅಂತ ನಮಗೆ ಸರಿಯಾಗಿ ಗೊತ್ತಿಲ್ಲ ನಾವು ಬೆಂಗಳೂರಲ್ಲಿ ಇರುವುದು’ ಎಂದು ನೋವಿನಿಂದ ಮಹಾಎಕ್ಸ್ ಪ್ರೆಸ್ ಗೆ ಹೇಳಿಕೆ ನೀಡಿದ್ದಾರೆ.
ಕ್ರಿಮಿನಲ್ ಹಿನ್ನಲೆಯಿರುವ ದಯಾನಂದ:
ಮಂಗಳೂರು ಏರ್ ಪೊರ್ಟ್ ನಲ್ಲಿ ಟ್ಯಾಕ್ಸಿ ಚಾಲಕನಾಗಿದ್ದಾಗ ದಯಾನಂದಮಹಾರಾಷ್ಟ್ರದ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಕಾವೂರು ಠಾಣೆಯಲ್ಲಿ ಕೇಸು ದಾಖಲಾಗಿ ಎರಡು ದಿನ ಬಂಧನದಲ್ಲಿದ್ದ ಎಂದು ತಿಳಿದು ಬಂದಿದೆ.