ಬೆಳ್ತಂಗಡಿ: ಓರ್ವ ಸ್ವಾಮೀಜಿಯ ಮುಖವಾಡ ಧರಿಸಿದ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಉತ್ತರ ಪ್ರದೇಶ ರಾಜ್ಯ ಅತ್ಯಾಚಾರ ಪ್ರದೇಶವಾಗಿ ಮಾರ್ಪಾಡಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ಆರೋಪಿಸಿದರು.
ಅವರು ಸಂಘಟನೆಯ ರಾಜ್ಯ ಸಮಿತಿ ಕರೆಯಂತೆ ದಸಂಸ (ಅಂಬೇಡ್ಕರ್ ವಾದ) ಹಾಗೂ ಪ್ರಗತಿಪರ ಸಂಘಟನೆ ನೇತೃತ್ವದಲ್ಲಿ ಇಂದು ಸಂಜೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.
ಇಡೀ ದೇಶದಾದ್ಯಂತ ದಲಿತ, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ಧಾಳಿ, ದೌರ್ಜನ್ಯ ನಡೆಯುತ್ತಿದೆ. 4 ನಿಮಿಷಗಳಿಗೊಮ್ಮೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದರೂ ದೇಶದ ಪ್ರಧಾನಿ ನರೇಂದ್ರ ಮೋದಿ ಮೌನವಾಗಿ ಈ ಅಮಾನವೀಯ ದೌರ್ಜನ್ಯಕ್ಕೆ ಬೆಂಗಾವಲಾಗಿ ನಿಂತಿದ್ದಾರೆ ಎಂದು ದೂರಿದ ಅವರು ಹಿಂದುತ್ವದ ಸಿದ್ಧಾಂತದ ಆಧಾರದಲ್ಲಿ ಅಧಿಕಾರಕ್ಕೆ ಬಂದ ಶ್ರೀರಾಮನ ಜನ್ಮಸ್ಥಳವಾದ ಉತ್ತರ ಪ್ರದೇಶ ರಾಜ್ಯದಲ್ಲಿ ಸೀತೆಯರ ಮಾನ ,ಪ್ರಾಣ ಅಪಹರಣವಾಗುತ್ತಿದ್ದರೂ ಹಿಂದುತ್ವವಾದಿಗಳು ನರಸತ್ತವರಂತೆ ಮೌನವಾಗಿದ್ದಾರೆ ಎಂದು ಆರೋಪಿಸಿದರು .
ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಮಾತನಾಡಿ ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ಕೊಲೆಗೀಡಾದ ಹೆಣ್ಣು ಮಗಳ ಶವವನ್ನು ಮನೆಯವರಿಗೆ ನೀಡದೆ ಪೋಲಿಸರೇ ದಹನ ಮಾಡುವ ಮೂಲಕ ಸಾಕ್ಷ್ಯಾಧಾರಗಳನ್ನು ನಾಶ ಮಾಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಲಿಖಿತ ತುರ್ತು ಪರಿಸ್ಥಿತಿ ಹೇರಳವಾಗಿದೆ. ಈ ಕಾರಣದಿಂದಾಗಿ ಸಂತ್ರಸ್ತೆಯ ಮನೆಗೆ ತೆರಳಲು ರಾಜಕೀಯ, ಸಾಮಾಜಿಕ ಹೋರಾಟಗಾರರಿಗೆ ಅವಕಾಶ ನಿರಾಕರಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತ, ಮಹಿಳೆ , ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರ ಮೇಲೆ ವ್ಯಾಪಕ ಧಾಳಿ, ದೌರ್ಜನ್ಯ ನಡೆಯುತ್ತಿದೆ . ಇದರ ವಿರುದ್ಧ ಸಮರಧೀರ ಹೋರಾಟದ ಅಗತ್ಯವಿದೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಗತಿಪರ ಚಿಂತಕ ದಮ್ಮಾನಂದ ಬೆಳ್ತಂಗಡಿ, ದಸಂಸ ಹಿರಿಯ ನಾಯಕ ವೆಂಕಣ್ಣ ಕೊಯ್ಯೂರು , ಸಂಚಾಲಕ ನೇಮಿರಾಜ್ ಕಿಲ್ಲೂರು ಮಾತನಾಡಿದರು.
ಬಳಿಕ ಬೆಳ್ತಂಗಡಿ ಬಸ್ ನಿಲ್ದಾಣದಿಂದ ಮಿನಿ ವಿಧಾನಕ್ಕೆ ಮುಂಬತ್ತಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ, ಉತ್ತರ ಪ್ರದೇಶ ಆಡಳಿತದ ವಿರುದ್ಧ ಘೋಷಣೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು . ಬೆಳ್ತಂಗಡಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿತ್ತು.
ಪ್ರತಿಭಟನೆಯ ನೇತೃತ್ವವನ್ನು ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ , ತಾ.ಪಂ ಸದಸ್ಯ ಓಬಯ್ಯ ಆರಂಬೋಡಿ , ದಸಂಸ ಮೈಸೂರು ವಿಭಾಗ ಸಂ ಸಂಚಾಲಕ ಬಿ.ಕೆ ವಸಂತ , ಮುಖಂಡರಾದ ಶ್ರೀಧರ್ ಕಳೆಂಜ , ನಾರಾಯಣ ಪುದುವೆಟ್ಟು , ಶೇಖರ್ ಕಣಿಯೂರು , ಜಯಾನಂದ ಕೊಯ್ಯೂರು , ಶ್ರೀನಿವಾಸ್ ಉಜಿರೆ, ಸತೀಶ್ ಅಳದಂಗಡಿ , ನಾಗರಾಜ್ ಎಸ್ ಲಾಯಿಲ , ಬೇಬಿ ಸುವರ್ಣ , ಗಣೇಶ್ ಕುಕ್ಕೇಡಿ, ಆನಂದ ನೆಲ್ಲಿಂಗೇರಿ , ವಿಜಯ ಬಜಿರೆ , ಸುಂದರ ಎಸ್ಎಂಟಿ , ಹರೀಶ್ ಕುಮಾರ್ ಲಾಯಿಲ , ಗಣೇಶ್ ಕಣಿಯೂರು , ಪ್ರಭಾಕರ್ ಶಾಂತಕೋಡಿ , ಬಾಬು ಎಂ ಬೆಳಾಲು , ಹರೀಶ್ ಎಲ್ ಸುಮ್ಮನೆ , ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಎಲ್ ಲಾಯಿಲ, ಎಡಪಂಥೀಯ ಮುಖಂಡರಾದ ಹರಿದಾಸ್ ಎಸ್, ಎಂ ,ಸುಜೀತ್ ಉಜಿರೆ ವಹಿಸಿದ್ದರು.