ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವರ ಒಡೆತನದ ಪ್ರಸನ್ನ ಎಜುಕೇಷನ್ ಟ್ರಸ್ಟ್(ರಿ) ನ ಆಡಳಿತ ಮಂಡಳಿ ಸರಕಾರದ ಜಾಗವನ್ನು ತಮ್ಮ ಜಾಗವೆಂದು ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಬಂದಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿರುವ ಪ್ರಸನ್ನ ಎಜುಕೇಷನ್ ಟ್ರಸ್ಟ್ (ರಿ) ಅಧ್ಯಕ್ಷರಾಗಿರುವ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಗಂಗಾಧರ ಗೌಡ ರವರು ಸರ್ವೆ ನಂಬರ್ 160/1 ರಲ್ಲಿರುವ ಸರಕಾರಿ ಜಾಗವಾದ ಸುಮಾರು 0.30 ಎಕ್ರೆ ಜಾಗವನ್ನು ಯಾವುದೇ ಸರಕಾರದ ಅನುಮತಿ ಪಡೆಯದೆ ಅನಧಿಕೃತವಾಗಿ ಜೆಸಿಬಿ ಬಳಸಿಕೊಂಡು ಸಮತಟ್ಟು ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಸರಕಾರದ ಜಾಗವನ್ನು ತಮ್ಮ ವಶದಲ್ಲಿರಿಸಿಕೊಂಡು ಅದನ್ನು ಹಂತ ಹಂತವಾಗಿ ಜೆಸಿಬಿ ಬಳಸಿ ಸಮತಟ್ಟು ಮಾಡುತ್ತಿದ್ದರು. ಇದೀಗ ಕಳೆದ ಕೆಲ ದಿನಗಳಿಂದ ಸರಕಾರಿ ಜಾಗವನ್ನು ಸಂಪೂರ್ಣವಾಗಿ ಸಮತಟ್ಟು ಮಾಡಿಸುತ್ತಿದ್ದರು. ಅದಲ್ಲದೆ ಹೊಸದಾಗಿ ಐದು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿರುವ ಕಾಲೇಜಿಗೆ ಹೋಗಲು ರಸ್ತೆಯನ್ನು ಇದೆ ಸರಕಾರಿ ಜಾಗದ ಮೂಲಕ ಮಾಡಿಕೊಂಡಿದ್ದಾರೆ. ಈ ಜಾಗವನ್ನು ತಮ್ಮ ಟ್ರಸ್ಟ್ ಗೆ ಸರಕಾರದಿಂದ ಮಂಜೂರು ಮಾಡಿಸಿಕೊಳ್ಳಲು ನಾನಾ ರೀತಿಯಲ್ಲಿ ಸಚಿವರ ಮೂಲಕ ಪತ್ರ ಮಾಡಿಸಿ ಸರ್ಕಸ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ತಹಶೀಲ್ದಾರ್ ಗೆ ಹಲವು ದೂರುಗಳು ಬಂದ ಮೇರೆಗೆ ಸರಕಾರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಸಮತಟ್ಟು ಮಾಡಿದ ಬಗ್ಗೆ ವರದಿಯನ್ನು ಮಾಡಿ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.


