ಬೆಳ್ತಂಗಡಿ: ಬಡತನದ ದುಸ್ಥಿತಿಯಲ್ಲಿದ್ದ ತನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿ ಕುಟುಂಬದ ವಿರುದ್ಧ ಸುಳ್ಳು ಸಾಕ್ಷಿ ಹೇಳಿಸಿ ಷಡ್ಯಂತ್ರ ರೂಪಿಸಲಾಗಿತ್ತು. ಈ ಷಡ್ಯಂತ್ರದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಚಾರ್ಜ್ಶೀಟ್ ಸಲ್ಲಿಸಲು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿಗೆ) ನಿರ್ದೇಶನ ನೀಡಬೇಕು ಎಂದು ಕೋರಿ ಪ್ರಕರಣದ ಪ್ರಮುಖ ಆರೋಪಿ ಚಿನ್ನ ಸಿ.ಎನ್. ಅಲಿಯಾಸ್ ಚಿನ್ನಯ್ಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ.
ಜೂ.11ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರ್ಕಾರ, ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ವಿಚಾರಣೆಯನ್ನು ಜೂ.29ಕ್ಕೆ ನಿಗದಿಪಡಿಸಿದೆ. ಪ್ರಕರಣದಲ್ಲಿ ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣವರ್ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಪಾಂಗಳದ ವಿಠಲ್ ಗೌಡ, ಜಯಂತ್, ಎಂ.ಡಿ.ಸಮೀರ್, ಸುಜಾತ ಭಟ್ ಯೂಟ್ಯೂಬರ್ಗಳಾದ ಅಜಯ್ ಅಂಚನ್, ದಿನೇಶ್ ಮತ್ತಿತರರು ಸಂಚಿನ ಭಾಗವಾಗಿದ್ದಾರೆ. ಸುಪ್ರೀಂಕೋರ್ಟ್ ವಕೀಲ ಕೆ.ವಿ. ಧನಂಜಯ ಅವರ ಕಚೇರಿ ಮತ್ತು ದೆಹಲಿಯ ಲಾಡ್ಜ್ ವೊಂದರಲ್ಲಿ ನ್ಯಾಯಾಲಯಗಳ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಲು ತನಗೆ ಬೆದರಿಕೆ ಹೊಡ್ಡಿ ತರಬೇತಿ ನೀಡಲಾಗಿದ್ದು ಕ್ಷೇತ್ರದ ಪ್ರಾವಿತ್ಯತೆಗೆ ದಕ್ಕೆ ತರಲು ಮತ್ತು ವೀರೇಂದ್ರ ಹೆಗ್ಗಡೆಯವರನ್ನು ಜೈಲುವಿಗೆ ಕಳುಹಿಸಲು ರೂ. 200 ಕೋಟಿ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿದ್ದು ಎಂದು ಅರ್ಜಿ ಯಲ್ಲಿ ವಿವರಿಸಲಾಗಿದೆ.


