ಕಡಬ: ಮೊಬೈಲ್ ನಲ್ಲಿ ಹಿಂದೂ ಯುವತಿಯರ ಫೋಟೋ ತೆಗೆದರೆಂದು ಆಪಾದನೆ ಹೊರಿಸಿ ಕೊಂಬಾರಿನ ಸ್ಥಳೀಯರು ಅನ್ನಡ್ಕ ಬಳಿಯ ಯುವಕರಿಬ್ಬರಿಗೆ ಸಾರ್ವಜನಿಕವಾಗಿ ಹೊಡೆದ ಘಟನೆ ನಡೆದಿದೆ. ಮಾಡದ ತಪ್ಪಿಗೆ ಪೆಟ್ಟು ತಿಂದು ಮನನೊಂದ ಯುವಕರಿಬ್ಬರು ಕಾರ್ಮಿಕ ಕ್ಷೇತ್ರ ಮಜ್ಜಾರು ದೈವದ ಮೊರೆಹೋಗಿದ್ದಾರೆ.
ಕೋಡಿಂಬಾಳ ಗ್ರಾಮದ ಮಜ್ಜಾರಿನ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತೆರಳಿದ ಯುವಕರು ಅಲ್ಲಿನ ಮುಖ್ಯಸ್ಥರಲ್ಲಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ಹೀಗಾಗಿ ಇಬ್ಬರು ವ್ಯಕ್ತಿಗಳನ್ನೂ ಮಜ್ಜಾರು ಕ್ಷೇತ್ರಕ್ಕೆ ಬರುವಂತೆ ಸೂಚನೆ ನೀಡಿದ್ದರು.
ಅದರಂತೆ ಕಳೆದ ಮಂಗಳವಾರ ವ್ಯಕ್ತಿಗಳು ಕ್ಷೇತ್ರಕ್ಕೆ ಆಗಮಿಸಿದ್ದು, ಸಾರ್ವಜನಿಕವಾಗಿ ಯುವಕರಿಗೆ ಹೊಡೆದ ಹತ್ತರಿಂದ ನದಿನೈದು ಮಂದಿಯ ತಂಡ ಕೂಡ ಆಗಮಿಸಿತ್ತು. ಮಜ್ಜಾರು ಕ್ಷೇತ್ರಕ್ಕೆ ಬಂದು ದೈವ ಸನ್ನಿಧಿಯಲ್ಲಿ ಕೊಂಬಾರಿನ ಮನೆಯೊಂದರ ಸಿಟೌಟ್ ನಲ್ಲಿ ಕುಳಿತ ಕಾರಣ ತಪ್ಪು ತಿಳಿದು ಥಳಿಸಿರುವ ವಿಷಯ ತಿಳಿದು ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ. ಈ ವಿಚಾರ ಕಾರಣಿಕ ಕ್ಷೇತ್ರದಲ್ಲಿ ಮಾತುಕಥೆ ಮೂಲಕ ಬಗೆಹರಿದಿದೆ.
ಕೊಂಬಾರಿನಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿತ್ತು. ಹೀಗಾಗಿ ಚಿರತೆ ಹಿಡಿಯುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಊಟದ ಪ್ಯಾಕೆಟ್ ತೆಗೆದುಕೊಂಡು ಅನ್ನಡ್ಕದ ಯುವಕರಿಬ್ಬರು ಬಂದಿದ್ದರು. ಈ ವೇಳೆ ಸ್ಥಳೀಯ ಯುವತಿಯರು ಮನೆಯೊಂದರ ಸಿಟ್ ಔಟ್ ನಲ್ಲಿ ಕುಳಿತ್ತಿದ್ದರು. ಈ ಸಂದರ್ಭ ಮೊಬೈಲ್ನಲ್ಲಿ ಹಿಂದೂ ಯುವತಿಯರ ಫೋಟೋ ತೆಗೆದರು ಎಂದು ಪ್ರಚಾರವಾಗಿ ಜನ ಸೇರಿದ್ದರು. ಬಳಿಕ ಸಾರ್ವಜನಿಕರು ಇಬ್ಬರಿಗೂ ಥಳಿಸಿದ್ದರು.